ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದ ಗುಟ್ಟ ಬಿಚ್ಚಿಟ್ಟ ಸಚಿವ ಎಸ್ ಟಿ ಸೋಮಶೇಖರ್

ಕಾರವಾರ : ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಕೇಳುವುದೇ ಉನ್ನತ ಖಾತೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಶಿರಸಿಯಲ್ಲಿ ಕೆಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಅವರು ಜನರ ಎದುರು ನಾವು ಮಣ್ಣಿನ ಮಕ್ಕಳು ಎನ್ನುತ್ತಾರೆ.
ಮುಖ್ಯಮಂತ್ರಿ ಎದುರು ಲೋಕೋಪಯೋಗಿ, ನೀರಾವರಿ, ಗೃಹ ಖಾತೆಯ ಬೇಡಿಕೆ ಇಡುತ್ತಾರೆ. ಸಹಕಾರ, ಕಾರ್ಮಿಕ,ಕೃಷಿ ಖಾತೆ ಯಾರೂ ಬೇಡಿಕೆ ಇಡುವುದಿಲ್ಲ. ನಾವೆಲ್ಲ ಬೇಡದ ಖಾತೆಯನ್ನು ಪಡೆದು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದರು.
ಸಚಿವ ಸ್ಥಾನ ನೀಡದ್ದಕ್ಕೆ ಬೇಸರಗೊಂಡಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಸಹಕಾರ ಕೋರಿದ್ದರು. ನಾನು ಭೈರತಿ ಸೇರಿ ಎಲ್ಲರೂ ಅವರಿಗೆ ಕೈಜೋಡಿಸಿದೆವು ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲೇ ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕೃಷಿ ಸಚಿವ ಬಿ.ಸಿ.ಪಾಟೀಲ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಹ ಉಪಸ್ಥಿತರಿದ್ದರು.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಜನರಿಗೆ ಉತ್ತಮ ಸಂದೇಶ ಹೋಗಿದೆ.ಬೊಮ್ಮಾಯಿ ನೇತೃತ್ವದಲ್ಲಿ ಒಂದು ಮುಕ್ಕಾಲು ವರ್ಷ ರಾಜ್ಯದ ಜನರು ಆರಾಮವಾಗಿರಬಹುದು. ಒಳ್ಳೊಳ್ಳೆ ಕಾರ್ಯಕ್ರಮ ಮಾಡ್ತಾರೆ. ತಾಳ್ಮೆಯಿಂದ ಇರುತ್ತಾರೆ ಎಂಬ ಸಂದೇಶ ಜನರಿಗೆ ಹೋಗಿದೆ. ಬಿಜೆಪಿ ಪಕ್ಷ ಹಾಗೂ ಮುಖಂಡರ ಮೇಲಿನ ವಿಶ್ವಾಸದಿಂದ ಜನರು ಮತ ಹಾಕಿದ್ದಾರೆ. ಅದನ್ನು ಉಳಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಬೆಲೆ ಏರಿಕೆ ವಿಚಾರ ಸಂಬಂಧಿಸಿದಂತೆ ಸಿಎಂ 7 – 8 ರಂದು ದೆಹಲಿಗೆ ತೆರಳುತ್ತಿದ್ದಾರೆ. ಅದರ ಬಗ್ಗೆ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರ ಜತೆ ಮಾತನಾಡುತ್ತಾರೆ ಎಂದರು.




