ಸಿದ್ದರಾಮಯ್ಯ ಕೇಳುವ ದಾಟಿ ನಿಮಗೆ ಗೊತ್ತಲ್ಲ- ಏಯ್ ಕೊಡಯ್ಯ ನೀನು ಎಂದಿದ್ದಾರೆ, ಬಾದಾಮಿ ಅಭಿವೃದ್ಧಿಗೆ ಅನುದಾನ ಕೊಡುವೆ: ಸಚಿವ ಆನಂದ್ ಸಿಂಗ್

ಬಾಗಲಕೋಟೆ: ಏಯ್ ಏನು ಕೊಡ್ತಿಯಾ ಕೊಡಯ್ಯ ಸಿದ್ದರಾಮಯ್ಯ ಕೇಳುವ ದಾಟಿ ನಿಮಗೆ ಗೊತ್ತಲ್ಲ. ಏಯ್ ಕೊಡಯ್ಯ ನೀನು ಎಂದರು. ಖಂಡಿತ ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಕೊಡುವುದಾಗಿ ಹೇಳಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಬಾದಾಮಿಯ ಬನಶಂಕರಿಯಲ್ಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಬಾದಾಮಿ ಬನಶಂಕರಿ ಪುಷ್ಕರಣಿಗೆ ಕೊಳಚೆ ನೀರು ಬಂದು ಸೇರುತ್ತಿದೆ ಎಂದು ಹೇಳಿದರು. ಖಂಡಿತವಾಗಿ ತಾಯಿ ಬನಶಂಕರಿ ದೇವಿ ಕಾರ್ಯ ಮಾಡುತ್ತೇನೆ. ಅದಕ್ಕೆ 1 ಕೋಟಿನೋ, 50 ಲಕ್ಷ, 2 ಕೋಟಿ ಹಣ ಖರ್ಚಾದರೂ ಪುಷ್ಕರಣಿ ಶುದ್ಧೀಕರಣ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನು ಪ್ರವಾಸೋದ್ಯಮ ನೀತಿ -2020-2026 ಬಿಡುಗಡೆ ಮಾಡಲಾಗಿದ್ದು, 500ಕೋಟಿ ಹಣ ಮೀಸಲಿಡಲಾಗಿದೆ. ಜೊತೆಗೆ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು.ಇಂತಹ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಂಡು ರಾಜ್ಯ ಹೊರ ರಾಜ್ಯದಿಂದ ಪ್ರವಾಸಿಗರನ್ನು ಸೆಳೆಯಲಾಗುವುದು. ಟೂರಿಸಂ ಸರ್ಕ್ಯೂಟ್ ಮಾಡಲಾಗುವುದು ಎಂದರು.




