ಎಂಟು ದಿನ ಸತತ ಕಾರ್ಯಾಚರಣೆ; ಸೆರೆ ಸಿಗದ ಚಿರತೆ; ಭಯದಲ್ಲಿ ಗ್ರಾಮಸ್ಥರು

ಬಾಗಲಕೋಟೆ: ಜಮಖಂಡಿ ತಾಲೂಕಿನಲ್ಲಿ ಜನರ,ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದ ಚಿರತೆ ಕೊನೆಗೂ ಸಿಗದೇ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಜನರಲ್ಲಿ ಆತಂಕ ಮುಂದೆವರೆದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ತೋಟದ ವಸತಿ ಪ್ರದೇಶದಲ್ಲಿ ಮೊದಲು ಚಿರತೆ ಕಾಣಿಸಿಕೊಂಡಿತ್ತು. ಕಳೆದ ಮೇ.27ರಂದು ಕಾಣಿಸಿಕೊಂಡಿದ್ದ ಚಿರತೆ ರಾತ್ರಿ ಹೊತ್ತು ನಿಂಗಪ್ಪ ಹಗಡೆ ಎಂಬುವರ ನಾಯಿಯೊಂದನ್ನ ಅರೆಬರೆ ತಿಂದುಹಾಕಿತ್ತು. ಆ ಬಳಿಕ ರೈತರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಆಗ ಅಧಿಕಾರಿಗಳು ಚಿರತೆ ಚಲನವಲನ ಕಂಡು ಹಿಡಿಯಲು ಸಿಸಿಟಿವಿ ಅಳವಡಿಸಿದ್ದರು.
ಈ ವೇಳೆ ಚಿರತೆ ಮೇಕೆಯೊಂದನ್ನು ಬೇಟೆಯಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸ್ಥಳಕ್ಕೆ ಸ್ಥಳೀಯ ಶಾಸಕ ಆನಂದ್ ನ್ಯಾಮಗೌಡ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು ಸೂಚಿಸಿದ್ದರು. ಆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ನಿಂಗಪ್ಪ ಹೆಗಡೆ ಅವರ ತೋಟದ ಪ್ರದೇಶಕ್ಕೆ ಆಗಮಿಸಿ, ಅಲ್ಲಿಯೇ ಎಂಟು ದಿನಗಳ ಕಾಲ ಬೀಡುಬಿಟ್ಟಿದ್ದರು. ಸತತ ಎಂಟು ದಿನಗಳ ಕಾಲ ಚಿರತೆ ಹಿಡಿಯಲು ನಡೆಸಿದ ಕಾರ್ಯಾಚರಣೆ ವಿಫಲವಾಗಿದೆ. ಅಲ್ಲದೇ ೧೫ ಸಿಸಿ ಕ್ಯಾಮರಾಗಳನ್ನ ಅಳವಡಿಸಿ, ಅಲ್ಲಲ್ಲಿ ಹುಲಿ ಬೋನ್ ಅಳವಡಿಸಿದ್ರೂ ಚಿರತೆ ಮಾತ್ರ ಮತ್ತೆ ಪತ್ತೆಯಾಗಲೇ ಇಲ್ಲ.
ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಡ್ರೋಣ್ ಕ್ಯಾಮೆರಾ ಕೂಡ ಬಳಸಿ ಚಿರತೆ ಕಾರ್ಯಾಚರಣೆಗೆ ಮುಂದಾಗಿದ್ದರು, ಆದ್ರೆ ಚಿರತೆ ಮಾತ್ರ ಸಿಗಲೇ ಇಲ್ಲ. ಈ ಕಾರ್ಯಾಚರಣೆಗಾಗಿ ಬೆಳಗಾವಿಯ ಮಿನಿ ಪ್ರಾಣಿ ಸಂಗ್ರಹಾಲಯದ ಅರವಳಿಕೆ ವೈದ್ಯರು ಹಾಗೂ ಶಸ್ತ್ರಸಜ್ಜಿತ ಸಿಬ್ಬಂದಿ ಸೇರಿನ 70 ಜನರಿಂದ ಈ ಕಾರ್ಯಾಚರಣೆ ನಡೆಸಿದ್ದರು. ಆದ್ರೆ ಕೊನೆಗೂ ಚಿರತೆ ಸೆರೆಸಿಗದೇ ಇರುವ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಆದರೆ ಚಿರತೆ ಸರೆ ಸಿಗದ ಕಾರಣ, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಹೀಗಾಗಿ ನಿಂಗಪ್ಪ ಹೆಗಡೆ ಅವರ ಕುಟುಂಬಸ್ಥರು, ಚಿರತೆ ಇನ್ನೂ ಸಿಕ್ಕಿಲ್ಲ, ಹುಷಾರಾಗಿರಿ,ರಾತ್ರಿ ಹೊತ್ತು ತಿರುಗಾಡಬೇಡಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆಯಿಂದ ಚಿರತೆ ಭಯ ದೂರವಾಗುತ್ತೆ ಎಂದು ಸ್ವಲ್ಪಮಟ್ಟಿನ ಸಮಾಧಾನ ಪಟ್ಟಿದ್ದ ಗ್ರಾಮಸ್ಥರಿಗೆ ಮತ್ತೆ ಚಿರತೆ ಭಯ ಶುರುವಾಗಿದೆ..




