ಕೊಪ್ಪಳದಲ್ಲಿ ಕನಕದಾಸ ಮೂರ್ತಿ ವಿವಾದ; ಸಂಸದ ಸಂಗಣ್ಣ ಕರಡಿ ಪತ್ರಕ್ಕೆ ಕುರುಬ ಸಮಾಜ ಖಂಡನೆ; ಪ್ರತಿಭಟನೆ ಎಚ್ಚರಿಕೆ

ಬಾಗಲಕೋಟೆ : ಕೊಪ್ಪಳದಲ್ಲಿ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದು ಸರಿಯಾದುದಲ್ಲ. ಪತ್ರ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಕುರುಬ ಸಮಾಜದ ಮುಖಂಡ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಮಹಾಂತೇಶ ಹಟ್ಟಿ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಅವರು, ಕೊಪ್ಪಳದ ಬಸ್ ನಿಲ್ದಾಣದ ಎದುರಿಗೆ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ಮಾಡುವ ಬಹುದಿನಗಳ ಬೇಡಿಕೆ, ಆದರೆ ಹಿರಿಯ ಸಂಸದ ಸಂಗಣ್ಣ ಕರಡಿ ಜಾಗ ಅತಿಕ್ರಮಣ ಆಗಿದೆ ಎಂದು ಪತ್ರ ಬರೆದಿದ್ದು ಸರಿಯಲ್ಲ ಇದು ಖಂಡನೀಯ.ಈ ವಿಚಾರವಾಗಿ ರಾಜಕಾರಣ ಮಾಡಬೇಡಿ,ಭಕ್ತ ಕನಕದಾಸರು ಒಂದೆ ಜಾತಿಗೆ ಸೇರಿದವರಲ್ಲ.ಕುಲ ಕುಲ ಎಂದು ಹೊಡೆದಾಡದಿರಿ ಎಂದು ಹೇಳಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದವರು.ಅಂತವರ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಜಾಗ ಅತಿಕ್ರಮಣ ಆಗಿದೆ ಎಂದು ಪತ್ರ ಬರೆದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ಪತ್ರದ ಮೂಲಕ ತರುವ ಪ್ರಯತ್ನ ಕುರುಬ ಸಂಘ ಮಾಡುತ್ತಿದೆ.ಇವತ್ತು ಬಾದಾಮಿಗೆ ಆಗಮಿಸಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಕೊಡಲಾಗುವುದು ಎಂದು ಹೇಳಿದರು.




