ಮಳೆಗಾಲದ ಅತಿಥಿಗಳಿಗೆ ಭರ್ಜರಿ ಬೇಡಿಕೆ; ಕೊಡಗಿನ ವಿಶೇಷ ಖಾದ್ಯಗಳಿಗೆ ಮನಸೋತ ಪ್ರವಾಸಿಗರು

ಮಡಿಕೇರಿ: ಕೊಡಗಿನಲ್ಲಿ ಜೂನ್- ಜುಲೈ ತಿಂಗಳಿನಲ್ಲಿ ಸೋನೆ ಮಳೆ ಶುರುವಾಗುತ್ತದೆ. ಸೋನೆ ಮಳೆಗೆ ಮೈ ಕೊರೆಯುವ ಚಳಿಯೂ ಹೆಚ್ಚುತ್ತದೆ. ಅಟ್ಟದ ಮೇಲೆ ಇಟ್ಟ ಛತ್ರಿ, ಟ್ರಂಕಿನಲ್ಲಿ ಭದ್ರ ವಾಗಿದ್ದ ಸ್ವೆಟರ್, ಕೋಟು, ಟೋಪಿ, ಮಪ್ಲೇರ್, ಮಳೆಯ ಬೂಟ್ ಎಲ್ಲವೂ ಮೆಲ್ಲನೆ ಹೊರ ಬರುತ್ತವೆ. ಆದರೂ ಚಳಿ ಕಡಿಮೆಯಾಗುವುದಿಲ್ಲ. ಆಗ ಮನಸು ಚಳಿಗೆ ಆಹಾರ ಪದಾರ್ಥಗಳು ಬಳಸುವ ಶೈಲಿ ಕೂಡ ಬದಲಾಗುತ್ತದೆ. ಮಳೆಗಾಲಕ್ಕೆ ಹೊಂದುವ ರುಚಿ ರುಚಿಯಾದ ಆಹಾರವನ್ನು ಬಳಸುವ ಕಡೆ ಮನಸು ವಾಲುತ್ತದೆ. ಕೊಡಗಿನಲ್ಲಿ ಮಳೆಗಾಲದಲ್ಲಿ ಸಿಗುವ ಆಹಾರಗಳು ವಿಭಿನ್ನವಾಗಿರುತ್ತದೆ. ಅದರಲ್ಲಿ ಪಡಿ, ಅಣಬೆ, ಏಡಿ, ಬಿದಿರಿನ ಕುಡಿಯಾದ ಕಣಿಲೆ ಮತ್ತು ಹೊಳೆಮೀನು ಪ್ರಮುಖವಾದವು.

ಕೊಡಗಿನ ಹಳ್ಳ, ಭತ್ತದ ಗದ್ದೆ, ಕೆರೆ, ತೋಡುಗಳಲ್ಲಿ ಏಡಿಗಳು ಸಿಗುತ್ತದೆ. ಜಲಾಶಯದ ಹಿನ್ನೀರಿನಿಂದ ಏಡಿಯನ್ನು ತರುತ್ತಿರುವ ಮಾರಾಟಗಾರರು 12 ಏಡಿಗೆ 300 ರೂಪಾಯಿಗಳಿಗೆ ಮಾರುತ್ತಿದ್ದಾರೆ. ಮಾರಾಟ ಕೂಡ ಬಹಳ ಜೋರಾಗಿದೆ. ಅದೇ ರೀತಿ ಕೊಡಗಿನ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಮೂರ್ನಾಡು, ಗೋಣಿಕೊಪ್ಪ ಮುಂತಾದ ಕಡೆ ಕಣಿಲೆ, ಅಣಬೆ, ಏಡಿ, ಹೊಳೆ ಮೀನು, ಮರಕೆಸ ಭರ್ಜರಿಯಾಗಿ ವ್ಯಾಪಾರ ವಾಗುತ್ತಿದೆ ಹಾಗೂ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.
ಈ ಎಲ್ಲಾ ಆಹಾರ ಪದಾರ್ಥಗಳು ಮಳೆಗಾಲದಲ್ಲಿ ಚಳಿಯ ನಡುವೆ ಬಿಸಿಬಿಸಿ ಅಡುಗೆ ತಯಾರಿಸಿ ತಿನ್ನಲು ಬಹಳ ಸೊಗಸು, ಕೊಡಗಿನ ಮಳೆಗಾಲ ಆನಂದಿಸಲು ಬರುವ ರಾಜ್ಯ ಮತ್ತು ಹೊರ ರಾಜ್ಯಗಳ ಪ್ರವಾಸಿಗರಿಗೂ ಈ ಆಹಾರ ಪದಾರ್ಥಗಳು ಅಚ್ಚುಮೆಚ್ಚು.




