ಕಾರವಾರ : ಕಡಲ ತೀರದಲ್ಲಿ ಅಪ್ರಾಪ್ತ ಪ್ರೇಮಿಗಳ “ಕಾಮಕೇಳಿ” ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಕಾರವಾರ : ಮೈಸೂರು ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪ್ರವಾಸಿಗರು ಹೆಚ್ಚಾಗಿ ಬರುವ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲು ಆದೇಶ ಮಾಡಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಆದೇಶಕ್ಕೆ ಕಿಮ್ಮತ್ತಿಲ್ಲದೇ ಪ್ರವಾಸಿ ಸ್ಥಳವೀಗ ಅಪ್ರಾಪ್ತ ಮಕ್ಕಳ ಅಶ್ಲೀಲದಾಟದ ತಾಣವಾಗುತ್ತಿದೆ.
ಜಿಲ್ಲೆಯ ಕಾರವಾರದಲ್ಲಿ ಯಾರ ಭಯವೂ ಇಲ್ಲದೇ ನಗರದ ಗಾಂಧಿಪಾರ್ಕ್, ಮಕ್ಕಳ ಉದ್ಯಾನವನ, ಕಡಲತೀರ ಭಾಗದ ಪ್ರದೇಶದಲ್ಲಿ ಧಾರಾಕಾರ ಸುರಿವ ಮಳೆಯ ನಡುವೆಯೂ ಅಪ್ರಾಪ್ತ ಜೋಡಿಗಳು “ಕಾಮಕೇಳಿ”ಯಲ್ಲಿ ತೊಡಗುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಕಾಲೇಜು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದು, ಯಾರ ಭಯವಿಲ್ಲದೇ ತಮ್ಮ ಕೆಟ್ಟ ಚಟುವಟಿಕೆಯನ್ನು ನಿರ್ವಿಘ್ನವಾಗಿ ನಡೆಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಅಪ್ರಾಪ್ತರೇ ಆಗಿರುವುದು ವಿಶೇಷವಾಗಿದೆ.
ರವೀಂದ್ರನಾಥ ಕಡಲತೀರ, ಗಾಂಧಿಪಾರ್ಕ್, ಮಕ್ಕಳ ಉದ್ಯಾನವನ, ರಾಕ್ ಗಾರ್ಡನ್ ಹಿಂಭಾಗ, ದಿವೇಕರ್ ಕಾಲೇಜು ಹಿಂಭಾಗ, ಕಾಲೇಜು ವಿದ್ಯಾರ್ಥಿಗಳ “ಕಾಮಕೇಳಿ” ಆಟದ ಹಾಟ್ ಸ್ಫಾಟ್ ಆಗಿ ಹೋಗಿದೆ. ದೂರದಲ್ಲಿ ಜನ ಬಂದರೆ ಕೆಲವರು ಅಡಗಿ ಕುಳಿತರೆ ಇನ್ನು ಕೆಲವರು ಯಾರ ಭಯವಿಲ್ಲದೇ ತಮ್ಮ ಆಟದಲ್ಲಿ ಮಗ್ನರಾಗಿರುತ್ತಾರೆ.
ಇನ್ನು ಜಿಲ್ಲೆಯ ಗೋಕರ್ಣ,ಕುಮಟಾ,ಹೊನ್ನಾವರ ಕಡಲ ತೀರದಲ್ಲೂ ಸಹ ಇದೇ ದೃಶ್ಯಗಳು ಕಂಡು ಬರುತ್ತದೆ. ಇನ್ನು ಈ ಸ್ಥಳಗಳು ಮದ್ಯ ಸೇವಿಸುವವರ, ಗಾಂಜಾ ಹೊಡೆಯುವವರ ಅಡ್ಡೆ ಸಹ ಆಗಿದೆ. ಇನ್ನು ಈ ಭಾಗಗಳಲ್ಲಿ ಸಿಸಿಟಿವಿಯಾಗಲಿ ಪೊಲೀಸರಾಗಲಿ ಇಲ್ಲದಿರುವುದು ಕೆಟ್ಟ ಕೆಲಸ ಮಾಡುವವರಿಗೆ ರತ್ನಗಂಬಳಿ ಹಾಸಿ ಕರೆದಂತಾಗಿದೆ.
ಜಿಲ್ಲಾಡಳಿತದಿಂದ ಕಡಲ ತೀರದ ಆಯಕಟ್ಟು ಪ್ರದೇಶದಲ್ಲಿ ಪ್ರವಾಸಿ ಮಿತ್ರ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇದು ಸಾಲದು ಎಂಬಂತೆ ಶರಾವತಿ ಕಾರ್ಯಪಡೆ ಸಹ ಅಸ್ತಿತ್ವದಲ್ಲಿ ಇದೆ. ಆದರೆ ಇದು ನೆಪ ಮಾತ್ರಕ್ಕೆ ಎನ್ನುವಂತಾಗಿದೆ. ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ ಹೊರತುಪಡಿಸಿ ಉಳಿದ ಭಾಗದಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಕಾರ್ಯ ಶೂನ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತೋರಿಕೆಗೆ ಪ್ರವಾಸಿ ಸ್ಥಳಗಳಲ್ಲಿ ಪೊಲೀಸರು ರೌಂಡ್ ಹೊಡೆದಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.




