ಕಾಲುವೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು; ಅಧಿಕಾರಿ, ಗುತ್ತಿಗೆದಾರರ ತಪ್ಪಿಗೆ ಅನ್ನದಾತ ಕಂಗಾಲು

ಕಲಬುರ್ಗಿ: ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದ ಅನ್ನದಾತರು ಕಂಗಾಲಾಗಿದ್ದಾರೆ. ಜಲಾಶಯದ ಕಾಲುವೆ ಒಡೆದು ನೂರಾರು ಎಕರೆ ರೈತರ ಜಮೀನಿಗೆ ನೀರು ನುಗ್ಗಿ ರೈತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.. ಸಾಲ-ಸೂಲ ಮಾಡಿಕೊಂಡು ಬೆಳೆದಿದ್ದ ಮುಂಗಾರು ಬೆಳೆ ಕಳೆದುಕೊಂಡು ರೈತರು ಬದುಕಿನ ಭರವಸೆ ಕಳೆದುಕೊಂಡಿದ್ದಾರೆ..
ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ಬೆಳಕೋಟಾ ಜಲಾಶಯದಿಂದ ನೀರು ಬಿಟ್ಟಿರೋದ್ರಿಂದ ನೀರಿನ ರಭಸಕ್ಕೆ ಕಾಲುವೆ ಒಡೆದು ಅಪಾಯ ಪ್ರಮಾಣ ನೀರು ರೈತರ ಜಮೀನಿಗೆ ನುಗ್ಗಿದೆ. ನೀರಿನ ರಭಸಕ್ಕೆ ರೈತರು ಬೆಳೆದಿದ್ದ ನೂರಾರು ಎಕರೆಯ ತೋಗರಿ, ಹೆಸರು, ಉದ್ದು, ಸೋಯಾ ಸೇರಿದಂತೆ ಮುಂಗಾರು ಬೆಳೆ ಕೊಚ್ಚಿ ಹೋಗಿದೆ. ರೈತರ ಜಮೀನಿನಲ್ಲಿ ಒಂದು ಅಡಿಗೂ ಹೆಚ್ಚು ನೀರು ಶೇಖರಣೆ ಆಗಿ ಬೆಳೆ ಕೊಳೆಯುತ್ತಿದೆ. ಸಾಲ ಸೂಲ ಮಾಡಿಕೊಂಡು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬದುಕಿನ ಬೆಳೆ ಕಳೆದುಕೊಂಡು ಅನ್ನದಾತರು ಅಕ್ಷರಶಃ ದಿಕ್ಕೂ ತೋಚದೆ ಕಂಗಾಲಾಗಿದ್ದಾರೆ. ಈ ಎಲ್ಲಾ ಅನಾಹುತಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಸೇರಿಕೊಂಡು ಕಳಪೆ ಕಾಮಾಗರಿಯಿಂದನೇ ಬೆಳೆ ಬರ್ಬಾದ್ ಆಗಿದೆ ಅಂತಾ ಆರೋಪಿಸುತ್ತ ರೈತರು ಆಕ್ರೋಶ ಹೊರಹಾಕ್ತಿದ್ದಾರೆ.
ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಕೇಸ್ಗೆ ಆಗ್ರಹ:
ಒಂದೆಡೆ ಬೆಳೆ ಕೊಚ್ಚಿ ಹೋಗಿದ್ರೆ ಮತ್ತೊಂದಡೆ ನೀರಿನ ರಭಸಕ್ಕೆ ಫಲವತ್ತಾದ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿ ರೈತರ ಜಮೀನಿನಲ್ಲಿ ಕಲ್ಲು ಬಂಡೆಗಳು ತೆಲಿವೆ. ಇದರಿಂದ ರೈತರು ಮತ್ತೆ ಕೃಷಿ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರ ಅನ್ನಕ್ಕೆ ಮಣ್ಣು ಹಾಕೋ ಕೆಲಸ ಅಧಿಕಾರಿಗಳು ಮಾಡಿದ್ದಾರೆ ಅಂತಾ ರೈತರು ಕೆಂಡ ಕಾರುತ್ತಿದ್ದಾರೆ. ಇನ್ನು ಈಗಾಗಲೇ ಒಡೆದಿರುವ ಕಾಲವೆ ನವೀಕರಣ ವರ್ಕ್ ಮಾಡಿ ಇನ್ನು ಮೂರು ತಿಂಗಳು ಕಳೆದಿಲ್ಲ. ಆಗಲೆ ಕಾಲುವೆ ಒಡೆದು ಹೋಗಿದೆ. ಕಳಪೆ ಕಾಮಗಾರಿಯಿಂದಲೇ ರೈತರು ಸಂಕಷ್ಟಕ್ಕೆ ಸೀಲುವಂತಾಗಿದೆ. ಕಳಪೆ ಕಾಮಗಾರಿ ಮಾಡಿ ಹಣ ಹೊಡೆದಿರುವ ನೀರಾವರಿ ಇಲಾಖೆ ಅಧಿಕಾರಿಗಳ, ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಮತ್ತು ಹಾನಿಯಾಗಿರುವ, ಹಾಳಾಗಿರುವ ರೈತರ ಬೆಳೆ ಸೂಕ್ತ ಪರಿಹಾರ ತಕ್ಷಣ ಕೊಡಬೇಕು ಅಂತಾ ರೈತ ಮುಖಂಡರು ಒತ್ತಾಯ ಮಾಡ್ತಿದ್ದಾರೆ.
ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅನ್ನೋ ಹಾಗೆ ಇಲ್ಲಿ ರೈತರು ಭರವಸೆಯ ಬೆಳೆ ಕಳೆದುಕೊಂಡು ನಷ್ಟಕ್ಕೆ ಸಿಲುಕಿ ಒದ್ದಾಡ್ತಿದ್ದಾರೆ. ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುಧ್ಧ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಹಾನಿಯಾಗಿರುವ ರೈತರ ಬೆಳೆಗೆ ಸೂಕ್ತ ಪರಿಹಾರ ಕೊಟ್ಟು ಸರ್ಕಾರ ಅನ್ನದಾತರ ಕೈ ಹಿಡಿಯಬೇಕಿದೆ.




