ಶನೇಶ್ವರನ ಭಕ್ತರಿಗೆ ಚರಂಡಿ – ಹಂದಿಗಳ ದರ್ಶನ

ಕಲಬುರಗಿ: ಈ ಊರು ಐತಿಹಾಸಿಕ ಸ್ಥಳವಾಗಿದ್ದರೂ ದುರ್ಗಮ ಸಮಸ್ಯೆಯಿಂದ ಊರಿನ ಜನ ಬೆಸತ್ತು ಹೋಗಿದ್ದಾರೆ. ಮಾತ್ರವಲ್ಲ ವಾರಕ್ಕೊಮ್ಮೆ ಶನೇಶ್ವರನ ಸಾವಿರಾರು ಭಕ್ತರು ಪರದಾಡ್ತಿದ್ದಾರೆ. ಶನೇಶ್ವರನ ದರ್ಶನ ಪಡೆಯಬೇಕಾದ್ರೆ ಮೊದಲು ಹೊಲಸಿನ ದರ್ಶನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ
ಕಲಬುರಗಿ ತಾಲ್ಲೂಕಿನ ಕೆರೆ ಬೋಸಗಾ ಗ್ರಾಮದ ಐತಿಹಾಸಿಕ ಶನೇಶ್ವರನ ದೇವಸ್ಥಾನದ ಮುಂಭಾಗಾದ ದುರ್ಗಮ ದೃಶ್ಯ ಹೇಳದಂತಿದೆ. ದೇವಸ್ಥಾನ ಮುಂಭಾಗದ ರಸ್ತೆ ಅದು ರಸ್ತೆಯೋ ಚರಂಡಿಯೋ ಅಂತಾ ಒಂದು ಕ್ಷಣ ಆಲೋಚಿಸುವ ಹಾಗಾಗಿದೆ. ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿರೋದ್ರಿಂದ ಶನೇಶ್ವರನ ಭಕ್ತರಿಗೆ ಸಾಕಷ್ಟು ಸಮಸ್ಯೆ ಉಂಟಾಗ್ತಿದೆ. ಸ್ವಚ್ಚವಾಗಿ ಸ್ನಾನ ಮಾಡಿಕೊಂಡು ಭಕ್ತಿಯಿಂದ ಶನೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಮೊದಲು ದರ್ಶನ ಆಗೋದೆ ಇಲ್ಲಿ ಈ ಚರಂಡಿ ನೀರು ಮತ್ತು ಹಂದಿಗಳ ದಿಗ್ದರ್ಶನ. ದೇವಸ್ಥಾನಕ್ಕೆ ಬರುವ ಭಕ್ತರು ಚರಂಡಿ ನೀರಿನಲ್ಲಿ ನಡೆದುಕೊಂಡು ಬಂದು ಶನೇಶ್ವರನ ದರ್ಶನ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.
ಐತಿಹಾಸಿಕ ಶನೇಶ್ವರ ದೇವಸ್ಥಾನ ಆವರಣದಲ್ಲಿ ಆಂಜನೇಯ, ಗಣಪತಿ, ದತ್ತಾತ್ರೇಯ, ಲಕ್ಷ್ಮಿ ನರಸಿಂಹ, ಶಿವ ಪಾರ್ವತಿ, 12 ಜೋತಿರ್ಲಿಂಗ ಸೇರಿದಂತೆ ಹಲವಾರು ದೇವಸ್ಥಾನಗಳಿಗವೆ. ಹೀಗಾಗಿ ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಶನಿವಾರದಂದು ಶನೇಶ್ವರನ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಹೀಗೆ ಬರುವ ಭಕ್ತರು ಈ ದುರಾವಸ್ಥೆಗೆ ಬೇಸತ್ತು ಹೋಗಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ರು, ಸಮಸ್ಯೆಗೆ ಮುಕ್ತಿ ಕೊಡಲು ಗ್ರಾಮ ಪಂಚಾಯ್ತಿ ಮುಂದಾಗಿಲ್ಲ. ಈ ದುರಾವಸ್ಥೆಯ ಸಮಸ್ಯೆ ಬಗ್ಗೆ ಗ್ರಾಮಸ್ಥರು, ಖುದ್ದು ಗ್ರಾಮ ಪಂಚಾಯತಿ ಸದಸ್ಯರು ಸಾಕಷ್ಟು ಬಾರಿ ಪಂಚಾಯತಿ ಪಿಡಿಓ, ಅಧ್ಯಕ್ಷರ ಗಮನಕ್ಕೆ ತಂದ್ರು ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ಮೂಲಭೂತ ಸೌಕರ್ಯಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಲಾಗುತ್ತದೆ ಅಂತಾ ಹೇಳ್ತಿದ್ರು ಯಾವುದೇ ಸೌಲಭ್ಯ ಕಲ್ಪಿಸಲಾಗ್ತಿಲ್ಲ ಅಂತಾ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ, ಬೇಜವಬ್ದಾರಿತನಕ್ಕೆ, ಭಕ್ತಿಯಿಂದ ಶನಿ ದೇವರ ದರ್ಶನಕ್ಕೆ ಬರುವ ಭಕ್ತ ವೃಂದ, ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನಾದ್ರು ಭೀಮಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಶನೇಶ್ವರನ ಭಕ್ತರಿಗೆ ಚರಂಡಿ ಗಲಿಜು ನೀರಿನ ದರ್ಶನದಿಂದ ಮುಕ್ತಿ ಕೊಡುವ ಕೆಲಸ ಮಾಡಬೇಕಿದೆ.




