ಪ್ರವಾಹದಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯನ್ನ ರಕ್ಷಿಸಿದ ಜೈಂಟ್ಸ್ ಗ್ರೂಪ್

ಬೆಳಗಾವಿ : ಜಲಾವೃತವಾಗಿದ್ದ ಮನೆಯಲ್ಲಿ ಸಿಲುಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಸ್ಥಳೀಯರ ಸಹಾಯದೊಂದಿಗೆ ಜೈಂಟ್ಸ್ ಗ್ರೂಪ್ ಯುವಕರ ತಂಡ ರಕ್ಷಿಸಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಇಂದ್ರಪ್ರಸ್ಥ ನಗರದ ಸಾಕಷ್ಟು ಮನೆಗಳು ಜಲಾವೃತವಾಗಿದ್ದವು. ಅದೇ ಏರಿಯಾದಲ್ಲಿ ತುಂಬು ಗರ್ಭಿಣಿಯೊಬ್ಬರು ಮನೆಯಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಜೈಂಟ್ಸ್ ಗ್ರೂಪ್ ತಂಡದ ಮದನ್ ಬಾಮ್ನೆ, ಸುನಿಲ್ ಮುತಗೇಕರ್, ಪ್ರತೀಕ್ ಗುರವ್ ಸೇರಿದಂತೆ ಯುವಕರ ತಂಡ ಗರ್ಭಿಣಿಯನ್ನು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಯುವಕರ ಕಾರ್ಯಕ್ಕೆ ಅಲ್ಲಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಜೈಂಟ್ಸ್ ಯುವಕರ ತಂಡ ಮಳೆಗಾಲದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಜನರನ್ನು ಸ್ಥಳಾಂತರಿಸಿದೆ.
ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ :

ಕಳೆದ ಎರಡು ದಿನದಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮಗಳು ನದಿಯಲ್ಲಿ ಮುಳುಗಿವೆ. ಕಲ್ಲೋಳ ಗ್ರಾಮದ ಕಮತೆ ತೋಟದಲ್ಲಿ ಕೃಷ್ಣಾನದಿಯ ಪ್ರವಾಹದಿಂದ ನೀರು ಬಂದು ಸಾಜನೆರವರ ಎನ್ನುವ ಮನೆಯ ನಾಲ್ವರು ನಿವಾಸಿಗಳು ಪ್ರವಾಹದಲ್ಲಿ ಸಿಲುಕಿದ್ದರು.
ನೀರು ಮನೆಯ ಸುತ್ತುವರೆದಿದ್ದು ಮಾಹಿತಿ ಬಂದ ಕೂಡಲೇ ಎನ್ ಡಿಆರ್ ಎಫ್ ಸಹಾಯದಿಂದ ಸ್ಥಳೀಯ ಅಂಕಲಿ ಪೊಲೀಸರು,ಜೋಕ್ ಸದಾಶಿವ ಸಾಜನೆ, ಅಶ್ವಿನಿ ಸದಾಶಿವ ಸಾಜನೆ, ಚಂದ್ರ ಬೈಕ್ ಸದಾಶಿವ ಸಾಜನೆ ಹಾಗೂ, ಅನಿತಾ ಸದಾಶಿವ ಸಾಜನೆಇವರೆಲ್ಲರನ್ನೂ ಯಡೂರ ಗ್ರಾಮಕ್ಕೆ ತಂದು ಸುರಕ್ಷಿತ ಸ್ಥಳಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಅಲ್ಲದೆ ಮೂಲವಾಡದ ದಲ್ಲಿ ಸಿಲುಕಿದ್ದ ಜನರನ್ನ ಶಿರಗುಪ್ಪಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಒಬ್ಬರನ್ನಮಂಗುರು ದಿಂದ ಯಮಗರಣಿ ಗೆ ದೊಡವಾಡ ಪೊಲೀಸರು ಸ್ಥಳಾಂತಿರಿಸಿದ್ದಾರೆ.




