ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ದಾಳಿ; ಆರೋಪಿ ಪರಾರಿ

ಕಾರವಾರ : ಕುಮಟಾ ತಾಲೂಕಿನ ನಾಗೂರು ಗ್ರಾಮದ ಕೆದಗಿಫಾಲನ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಕ್ರಮ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಟಾ ಪೊಲೀಸರು ಕಳ್ಳಬಟ್ಟಿ ಸರಾಯಿಯನ್ನು ವಶ ಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರು ಕೆದಗಿಫಾಲ್ ನಿವಾಸಿ ನಾರಾಯಣ ವೆಂಕಟೇಶ್ ಮರಾಠಿ ಈತ ಅಕ್ರಮ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಟಾ ಸಿ.ಪಿ.ಐ.ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಪಿಎಸ್ಐ ಆನಂದಮೂರ್ತಿ ಹಾಗೂ ರವಿ ಗುಡ್ಡಿ ಅವರ ತಂಡ ಮನೆಯಲ್ಲಿದ್ದ ನಾಲ್ಕು ಲೀಟರ್ ಕಳ್ಳಬಟ್ಟಿ ಸರಾಯಿ ವಶಪಡಿಸಿಕೊಂಡಿದೆ. ಆರೋಪಿ ನಾರಾಯಣ ವೆಂಕಟೇಶ್ ಮರಾಠಿ ಪರಾರಿಯಾಗಿದ್ಧಾನೆ.
ಮನೆಯಲ್ಲಿದ್ದ 1600 ರೂ.ಮೌಲ್ಯದ ಸುಮಾರು ನಾಲ್ಕು ಲೀಟರ್ ಕಳ್ಳಬಟ್ಟಿ ಸೇರಿದಂತೆ ಕಳ್ಳಬಟ್ಟಿಗೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕುಮಟಾ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.




