ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದ ಮೂವರು ಕುರಿಗಾಹಿಗಳು, 150 ಕುರಿಗಳ ರಕ್ಷಣೆ

ಧಾರವಾಡ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕುಂದಗೋಳ ತಾಲೂಕಿನ ಬಳಿಯ ಬೆಣ್ಣೆ ಹಳ್ಳವು ಉಕ್ಕಿ ಹರಿಯುತ್ತಿದ್ದು, ಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡ ಕುರಿಗಾಯಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಪಕ್ಕದ ಕುರಿಗಾಯಿಗಳು ತಮ್ಮ ಕುರಿಗಳನ್ನು ಮೇಯಿಸಲು ತೆರಳಿದ್ದರು. ಆದರೆ ಏಕಾಏಕಿ ಬೆಣ್ಣೆ ಹಳ್ಳದ ಹರಿವು ಹೆಚ್ಚಾಗಿದ್ದರಿಂದ ಹಳ್ಳ ದಾಟಲು ಪರದಾಟ ನಡೆಸಿದ್ದರು. ಸ್ಥಳಿಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ದೇವನೂರು ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡಲೇ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು, 4 ಗಂಟೆಗಳ ಕಾಲ ಸತತ ಕಾರ್ಯಚಾರಣೆ ನಡೆಸಿ 3 ಜನ ಕುರಿಗಾಯಿಗಳು, 150 ಕುರಿ ಸೇರಿ ಕುದುರೆಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.




