ಬಿಜೆಪಿ ಮುಖಂಡನ ಸಂಬಂಧಿ ಯುವಕನ ಕೊಲೆ; 3 ಗಂಟೆಯಲ್ಲಿ ಆರೋಪಿಗಳ ಬಂಧನ

ಹುಬ್ಬಳ್ಳಿ: ಕಳೆದ ದಿನ ತಡ ಸಂಜೆ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನ ಸಂಬಂಧಿ ಯುವಕ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವಕನ ಹತ್ಯೆಯಾದ ಮೂರೇ ಗಂಟೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಅವರ ಚಿಕ್ಕಪ್ಪನ ಮಗ ಅಭಿಷೇಕಗೌಡ ಪಾಟೀಲ ಯುವಕನನ್ನು ಗೋಪನಕೊಪ್ಪ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ್ದ ಎಸಿಪಿ ವಿನೋದ ಮುಕ್ತೆದಾರ ನೇತೃತ್ವದ ತಂಡ ಪರಾರಿಯಾದ ಪ್ರವೀಣ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ ಇದ್ದಲಗಿ ಎಂಬುವವರನ್ನು ಮೂರೇ ಗಂಟೆಯಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅಭಿಷೇಕನೊಂದಿಗೆ ಜಗಳವಾಡಿದ್ದ ಪ್ರವೀಣ ಬೇವಿನಕಟ್ಟಿ, ಪಾಟೀಲರ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ. ಅದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಅದೇ ಕಾರಣದಿಂದಲೇ ನಿನ್ನೆಯೂ ಕೂಡಾ ಜಗಳವಾಗಿದೆ. ತಕ್ಷಣವೇ ಸಾಯಿ ಮತ್ತು ಕುಮಾರನನ್ನು ಕಳಿಸಿ ಕೊಲೆ ಮಾಡಿಸಿದ್ದಾನೆಂದು ಹೇಳಲಾಗುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ವಿನೋದ ಮುಕ್ತೆದಾರ ತಂಡವೂ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂರೇ ಗಂಟೆಯಲ್ಲಿ ಬಂಧಿಸಿದ್ದಾರೆ.ಅಶೋಕನಗರದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.




