ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ವರುಣನ ಅರ್ಭಟ

ಮುಂಗಾರು ಮಳೆ ಆರಂಭದ ನಂತರ, ಕಳೆದ ಮೂರು ವಾರದಗಳಿಂದ ನಿಂತಿದ್ದ ಮಳೆರಾಯ ಈಗ ಮತ್ತೆ ತನ್ನ ವರಸೆ ಮುಂದುವರೆಸಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಪೇಡಾನಗರಿ ಧಾರವಾಡದಲ್ಲೂ ಬಿಟ್ಟು ಬಿಡದೇ ಅಬ್ಬರಿಸುತ್ತಿದೆ. ಕಳೆದ ಎರಡು ದಿನಗಳಿಂದ ಜಿಟಿ ಜಿಟಿಯಾಗಿ ಸುರಿಯುತ್ತಿದ್ದ ಮಳೆ ಇಂದು ಮುಂಜಾನೆಯಿಂದಲೇ ಜೋರಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ನಿರಂತರವಾಗಿ ಸುರಿದ ಮಳೆಯಿಂದ ಅವಳಿನಗರದ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿರುವ ನಿವಾಸಿಗಳಲ್ಲಿ ಮಳೆಯ ಆತಂಕ ಎದುರಾಗಿದೆ. ರಸ್ತೆ ಬದಿಗಳಲ್ಲಿನ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮನೆಯೊಳಗೆ ಬಂದ ನೀರನ್ನು ಹೊರಹಾಕಲು ಜನರು ಪರದಾಟ ನಡೆಸಿದ್ದಾರೆ.
ಈಗಾಗಲೇ ರೈತರ ಬಿತ್ತನೆ ಕಾರ್ಯಗಳನ್ನು ಮುಗಿಸಿಕೊಂಡ ರೈತರು ಮಳೆಯ ನಿರೀಕ್ಷೆಯಲ್ಲಿದ್ದರು. ಕಳೆದ ಎರಡು ದಿನಗಳಿಂದ ಅವಳಿನಗರದ ಗ್ರಾಮೀಣ ಭಾಗದಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಇಂದು ಕೂಡಾ ಧಾರವಾಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ.
ಮುಂಗಾರು ಬೆಳೆಗಳಾದ ಸೋಯಾಬಿನ್, ಹೆಸರು, ಉದ್ದು, ಶೇಂಗಾ ಸೇರಿದಂತೆ ಹಲವು ಬೆಳೆಗಳು ಈಗ ಮಳೆರಾಯನ ಆಗಮನದಿಂದ ಹಚ್ಚ ಹಸಿರಿನಿಂದ ಕಂಗೊಳ್ಳಿಸುತ್ತಿದ್ದು, ರೈತರಿಗೆ ಉತ್ತಮ ಬೆಳೆ ನೀಡುವ ಭರವಸೆ ಹಟ್ಟಿಸಿದೆ.




