ಹು-ಧಾ ಮಾಹಾನಗರ ಪಾಲಿಕೆ ಚುನಾವಣೆ: ಮತದಾನ ಬಹಿಷ್ಕರಿಸಿದ ಭೈರಿದೇವರಕೊಪ್ಪ ನಿವಾಸಿಗಳು

ಧಾರವಾಡ: ಈಗಾಗಲೇ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆ ಕಾವು ಜೋರಾಗುತ್ತಿದ್ದು, ಅಭ್ಯರ್ಥಿಗಳು ಈಗ ಕಾಲಿಗೆ ಚಕ್ರ ಕಟ್ಟಿಕೊಂಡು ಮತ ಭೇಟೆ ಆರಂಭಿಸಿದ್ದಾರೆ. ಆದರೆ ಹುಬ್ಬಳ್ಳಿಯ ಬೈರಿದೇವರಕೊಪ್ಪದ ವಾರ್ಡ್ ನಂ- 35ನ ಮತದಾರರು ಈಗ ವಾರ್ಡ ವ್ಯಾಪ್ತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಶಾಕ್ ನೀಡಿದ್ದಾರೆ. ಮೂಲಭೂತ ಸೌಕರ್ಯ ಇಲ್ಲದೇ ಬೇಸತ್ತಿರುವ ನಿವಾಸಿಗಳು ಪಾಲಿಕೆ ಚುನಾವಣೆ ಮತದಾನದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ವಾರ್ಡ್ ನಂ-35ರ ಭೈರಿದೇವರಕೊಪ್ಪ, ರಾಜಧಾನಿ ಕಾಲೋನಿ, ಮಲ್ಲನಗೌಡ ಚಾಳ, ನಮ್ರತಾ ಪಾರ್ಕ್ ಬಡಾವಣೆಗಳಿಗೆ ರಸ್ತೆ ಸರಿಯಾದ ರಸ್ತೆ ಕಲ್ಪಿಸದ ಹಿನ್ನೆಲೆಯಲ್ಲಿ, ಈಗ ಪಾಲಿಕೆ ಜನಪ್ರತಿನಿದಿನಗಳ ವಿರುದ್ಧ ನಿವಾಸಿಗಳು ಸಿಡಿದೆದ್ದಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿವಾಸಿಗಳು ತೀರ್ಮಾಣ ಕೈಗೊಂಡಿದ್ದಾರೆ.
ಇನ್ನೂ ಬಡಾವಣೆಯ ವ್ಯಾಪ್ತಿಯಲ್ಲಿ ಸುಮಾರು 1000 ಕ್ಕೂ ಜನರು ವಾಸವಿದ್ದು, 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಪ್ರತಿ ಮನೆ ಮನೆಯ ಮುಂದೆಯೂ ಮತದಾನ ಬಹಿಷ್ಕಾರ ಎಂಬ ಸೂಚನಾ ಫಲಕ ನೇತು ಹಾಕಿ ಪಾಲಿಕೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯು ಮತ ಕೇಳಲು ಬರಬೇಡಿ ಎಂಬ ಸಂದೇಶ ನೀಡಿದ್ದಾರೆ.
ಕೆಲವು ವರ್ಷಗಳಿಂದ ಬಡಾವಣೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನೇ ಬಂದ್ ಮಾಡಿರುವದಕ್ಕೆ ಆಕ್ರೋಶ ಹೊರಹಾಕಿದರು. ಈ ಕುರಿತು ಈಗಾಗಲೇ ಸಾಕಷ್ಟು ಬಾರಿ ಶಾಸಕರು, ಸಚಿವರು, ಕಾರ್ಪೊರೇಟರ್ಗಳಿಗೆ ಮನವಿ ಸಲ್ಲಿಸಿದರು ಯಾರು ಕೂಡ ಮುತುವರ್ಜಿ ವಹಿಸಿಲ್ಲ. ಇದೀಗ ಮತದಾನ ಬಹಿಷ್ಕಾರ ಮಾಡಿರುವ ಸುದ್ದಿ ತಿಳಿದು ಬರುವ ನಾಯಕರು ನಮಗೆ ಶಾಶ್ವತ ಪರಿಹಾರ ನೀಡಲಿ ಇಲ್ಲದಿದ್ರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದರು.
ಈ ಕುರಿತು ಸ್ಥಳೀಯ ನಿವಾಸಿ ಪ್ರಭು ಮುಂಡಗೋಡ ಮಾತನಾಡಿ, ಬಹಳ ದಿನಗಳಿಂದ ಈ ಸಮಸ್ಯೆ ಇದ್ದರೂ ಕೂಡ ಯಾರೊಬ್ಬರೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಗ್ಯಾರೇಜ್ ಮುಂಭಾಗದಲ್ಲಿ ಕಿರಿದಾದ ರಸ್ತೆಯಲ್ಲಿ ಬರುವಾಗ ಅನೇಕ ಅಹಿತಕರ ಘಟನೆಗಳು ನಡೆಯುತ್ತವೆ. ಅರೋಗ್ಯ ಸಮಸ್ಯೆ ಆದರೆ ಆ್ಯಂಬುಲೆನ್ಸ್ ಬರಲು ಸಹ ಸಾಧ್ಯವಾಗದ ರೀತಿಯಲ್ಲಿ ರಸ್ತೆ ಇದೆ. ರಾತ್ರಿ ವೇಳೆ ಪುರುಷರು ನಡೆದಾಡಲು ಭಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ ಸ್ವ ಹಿತಾಸಾಕ್ತಿಗಾಗಿ ನಮ್ಮೆಲ್ಲರನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ. ನಮಗೆ ಶಾಶ್ವತ ಪರಿಹಾರ ಸಿಗುವವರೆಗೂ ಯಾವುದೇ ಕಾರಣಕ್ಕೂ ನಾವ್ಯಾರು ಮತ ಚಲಾಯಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
