ಕೊಡಸಳ್ಳಿ , ಕೈಗಾ ಅಣು ಸ್ಥಾವರಕ್ಕೆ ಭೂ ಕುಸಿತದ ಆತಂಕ : ಪರಿಶೀಲನೆ ನಡೆಸಿದ ಭೂ ಇಲಾಖೆ ತಜ್ಞರು

ಕಾರವಾರ : ಮಳೆ ನಿಂತರೂ ಅದರ ಪ್ರಭಾವ ನಿಂತಿಲ್ಲ ಎನ್ನುವಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಲಾಶಯ ಕೊಡಸಳ್ಳಿ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಮತ್ತೆ ಭೂ ಕುಸಿತದ ಆತಂಕ ಎದುರಾಗಿದೆ. ಕೊಡಸಳ್ಳಿ ಜಲಾಶಯದ 200 ಮೀಟರ್ ದೂರದಲ್ಲೇ ಬಹುದೊಡ್ಡ ಗುಡ್ಡ ಕುಸಿದಿದೆ. ಜಲಾಶಯದ ಸುತ್ತಲಿನ ಭಾಗದಲ್ಲಿ ಮತ್ತೆ ಭೂಮಿ ಕುಸಿಯುತ್ತಿದ್ದು, ಇಂದು ಕೇಂದ್ರ ಭೂ ಇಲಾಖೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಬಳಿ ಜಲಾಶಯದಿಂದ 200 ಮೀಟರ್ ಕೂಗಳತೆಯಲ್ಲಿ ಗುಡ್ಡ ಕುಸಿದಿದೆ. ಇದರ ಜೊತೆಗೆ ಜಲಾಶಯದ ಸುತ್ತಲೂ ಇರುವ ಗುಡ್ಡಭಾಗದಲ್ಲಿ ಈಗಲು ಸಹ ಕುಸಿತವಾಗುತ್ತಿದ್ದು, ನೀರಿನ ಪಸೆ ಆವರಿಸಿದೆ.
ಜಲಾಶಯದ ಹಿಂಭಾಗದಲ್ಲಿರುವ ಬಹುದೊಡ್ಡ ಗುಡ್ಡ ಜುಲೈ,23 ರಲ್ಲಿ ಕುಸಿತ ಕಂಡಿತ್ತು. ಆದರೆ ಇದೀಗ ಮಳೆಯಿಂದಾಗಿ ಜಲಾಶಯದ ಸುತ್ತಮುತ್ತಲೂ ಸಹ ಗುಡ್ಡ ಕುಸಿಯುತ್ತಿದೆ. ಹಲವು ಭಾಗದಲ್ಲಿ ಭೂ ಕುಸಿತದಿಂದ ದೊಡ್ಡ ದೊಡ್ಡ ಕಲ್ಲು ಬಂಡೆಗಳು, ಮರಗಳು ಕುಸಿದು ನೆಲಕಚ್ಚಿವೆ. ಇದಲ್ಲದೇ ವಿದ್ಯುತ್ ಗಾರದ ಪಕ್ಕದಲ್ಲೇ ಹಲವು ಭಾಗ ಸಹ ಕುಸಿತ ಕಂಡಿದ್ದು, ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಕಂಟಕ ಎದುರಾಗಲಿದೆ.
ಸದ್ಯ ಜಲಾಶಯದ ಹಿಂಭಾಗದಲ್ಲಿ ಕುಸಿದ ಮಣ್ಣನ್ನು ತೆಗೆಯುವ ಕಾರ್ಯ ಪ್ರಾರಂಭವಾಗಿದೆ.ಹೀಗಾಗಿ ಜಿಲ್ಲಾಡಳಿತ ಇಲ್ಲಿನ ಪರಿಸ್ಥಿತಿ ಅರಿಯಲು ಕೇಂದ್ರ ಭೂ ವಿಜ್ಞಾನಿಗಳ ಮೊರೆಹೋಗಿದ್ದು, ಇಂದು ಕೊಡಸಳ್ಳಿ ಡ್ಯಾಮ್ ನ ಭೂ ಕುಸಿತವಾದ ಸ್ಥಳಕ್ಕೆ ಕೇಂದ್ರ ಭೂ ಇಲಾಖೆಯ ಕಮಲ್ ಕುಮಾರ್ ಹಾಗೂ ಮೋಹನ್ ರಾಜ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇವರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯ ವಿಘ್ನೇಶ್ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ( ಸಿವಿಲ್ ವಿಭಾಗ) ಸಾತ್ ನೀಡಿದರು. ಇಬ್ಬರು ಕೇಂದ್ರ ಭೂ ವಿಜ್ಞಾನಿಗಳು ಮಣ್ಣು ಹಾಗೂ ಕಲ್ಲುಬಂಡೆಗಳ ಪರೀಕ್ಷೆ ನಡೆಸಿದರು. ಇನ್ನು ಕೆಪಿಸಿಯಿಂದಲೂ ಸಹ ತಜ್ಞರ ತಂಡ ಭೇಟಿ ನೀಡಲಿದ್ದು, ಇಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯದ ಭಾಗ ಹಾಗೂ ಕಾರವಾರ ತಾಲೂಕಿನ ಅಣಶಿ ಹಾಗೂ ಕೈಗಾ ಅಣುಸ್ಥಾವರದ ಸುತ್ತಲಿನ ಭಾಗದ ಹಲವು ಗುಡ್ಡವು ಕುಸಿತ ಕಂಡಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಭೂಗರ್ಭದ ಒಳಭಾಗ ಹಾಗೂ ಹೊರಭಾಗದಿಂದಲೂ ನೀರಿನ ಪ್ರಮಾಣ ಹೆಚ್ಚಾಗಿದೆ. 1990 ರಲ್ಲಿ ಈ ಭಾಗದ ಭೂಮಿಯ ಮಣ್ಣಿನ ಸಾಂದ್ರತೆ ಕುರಿತು ಕೇಂದ್ರ ಭೂ ವಿಜ್ಞಾನ ಇಲಾಖೆ ಸರ್ವೆ ಸಹ ನಡೆಸಿತ್ತು. ಇದರಂತೆ ನಾವು ಕೂಡ ಇಂದು ಈ ಭಾಗದಲ್ಲಿ ಸರ್ವೆ ಮಾಡಿದ್ದೇವೆ. ಸೆಟಲೈಟ್ ಮೂಲಕವೂ ಇವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ.ಇಲ್ಲಿನ ಕಲ್ಲು ಹಾಗೂ ಮಣ್ಣಿನ ಪರೀಕ್ಷೆ ನಡೆಸಿ ವರದಿಯನ್ನು ಹದಿನೈದು ದಿನದೊಳಗೆ ಜಿಲ್ಲಾಡಳಿತಕ್ಕೆ ನೀಡುತ್ತೇವೆ. ಸದ್ಯ ಶಿರಸಿ, ಯಲ್ಲಾಪುರ, ಕಾರವಾರ ಭಾಗದಲ್ಲಿನ ಭೂ ಕುಸಿತ ಪ್ರದೇಶದಲ್ಲಿ ಅಧ್ಯಯನ ಮಾಡಲಾಗಿದ್ದು, ಯಲ್ಲಾಪುರ ಭಾಗದ ಕಳಚೆ,ಕೊಡಸಳ್ಳಿ, ಅಣಶಿ ಭಾಗದಲ್ಲಿ ಗುಡ್ಡ ಕುಸಿತ ಕಂಡಿದೆ. ಕಳಚೆ ಗ್ರಾಮದಲ್ಲಿ ಅಧಿಕ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಮಣ್ಣಿನಲ್ಲಿ ನೀರಿನ ಫಸೆ ಇದ್ದು, ಅಪಾಯಕಾರಿಯಾಗಿದೆ.ಇನ್ನೂ ಕೂಡ ಅಧ್ಯಯನ ನಡೆಸಬೇಕು. ಸೆಟಲೈಟ್ ಮೂಲಕವೂ ಅಧ್ಯಯನ ನಡೆಸಲಾಗುತ್ತದೆ. ಯಲ್ಲಾಪುರದ ಕೊಡಸಳ್ಳಿ,ಕಳಚೆ ಭಾಗದಲ್ಲಿ ಅಪಾಯಕಾರಿಯಾಗಿದೆ. ಮಣ್ಣಿನಲ್ಲಿ ನೀರಿನ ಪಸೆ ಹೆಚ್ಚಿದೆ. ಮಣ್ಣಿನ ಸಾಂದ್ರತೆ ಕಡಿಮೆ ಇದ್ದು, ಹಿಡಿತ ಸಹ ಕಮ್ಮಿಯಿದೆ.
ಭೂಮಿಗೆ ಮೇಲಿನಿಂದ ಮಳೆಯ ನೀರು ಹಾಗೂ ಭೂಮಿಯ ಕೆಳಭಾಗದಲ್ಲಿ ಜಲ ಮೇಲೆದ್ದು ಬಂದಿರುವುದರಿಂದ ಎಲ್ಲಿ ಮಣ್ಣಿನ ಸಾಂದ್ರತೆ ಕಡಿಮೆ ಇದೆಯೋ ಆ ಭಾಗದಲ್ಲಿ ಭೂಮಿಯ ಒಳಭಾಗದಲ್ಲಿ ಕೊರೆತ ಆಗಿದ್ದು,ಅಲ್ಲಿ ಭೂಮಿ ಕುಸಿದಿದೆ. ಈಗಲೂ ಅಪಯಕಾರಿಯಾಗಿದೆ. ಹೆಚ್ಚಿನ ಅಧ್ಯಯನದ ಅವಶ್ಯಕತೆ ಸಹ ಇದ್ದು, ಪುನಃ ಈ ಭಾಗದಲ್ಲಿ ಅಧ್ಯಯನ ನಡೆಸುತ್ತೇವೆ ಎಂದು ಕೇಂದ್ರ ಭೂ ವಿಜ್ಞಾನ ಇಲಾಖೆಯ ಕರ್ನಾಟಕ ಹಾಗೂ ಗೋವಾ ರಾಜ್ಯ ವಿಭಾಗದ ಅಧಿಕಾರಿ ಕಮಲ್ ಕುಮಾರ್ ಮಾಹಿತಿ ನೀಡಿದ್ದು, ಹದಿನೈದು ದಿನದ ಒಳಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ನಿರಂತರ ಮಳೆಯ ಆರ್ಭಟ ಇದೀಗ ಕೊಡಸಳ್ಳಿ, ಕೈಗಾ ಅಣುಸ್ಥಾವರಕ್ಕೆ ಆತಂಕ ತಂದೊಡ್ಡಿದೆ. ಇಂದು ಆಗಮಿಸಿದ ಕೇಂದ್ರ ಭೂ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, 15 ದಿನದೊಳಗೆ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಆ ನಂತರವೇ ಇಲ್ಲಿನ ನೈಜ ಸ್ಥಿತಿ ಅರಿವಿಗೆ ಬರಲಿದೆ.




