ಕೋವಿಡ್ ಮೂರನೇ ಅಲೆ ಭೀತಿ: ಬಾದಾಮಿ ಬನಶಂಕರಿ ದೇಗುಲಕ್ಕೆ ಆಗಮಿಸಲು ಭಕ್ತರು ಹಿಂದೇಟು!!

ಬಾಗಲಕೋಟೆ: ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೊಳಿಸಿದ್ದು, ಬಾದಾಮಿ ಬನಶಂಕರಿ ದೇಗುಲಕ್ಕೆ ಬರಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.
ಐತಿಹಾಸಿಕ ಬಾದಾಮಿ ಬನಶಂಕರಿ ದೇಗುಲ ನಾಡಿನ ಶಕ್ತಿ ಪೀಠಗಳೊಲ್ಲೊಂದಾಗಿದೆ. ಬನಶಂಕರಿ ದೇಗುಲಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.ಅಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರದಿಂದಲೂ ಭಕ್ತರು ಬರುತ್ತಿದ್ದರು. ಮೊದಲ, ಎರಡನೇ ಅಲೆ ವ್ಯಾಪಕವಾಗಿದ್ದ ವೇಳೆ ದೇಗುಲ ಬಾಗಿಲು ಬಂದ್ ಆಗಿತ್ತು.
ಎರಡನೇ ಅಲೆ ವೈರಸ್ ಕಡಿಮೆಯಾದ ವೇಳೆ ಕಳೆದ ಒಂದು ತಿಂಗಳ ಹಿಂದೆಯಷ್ಟೇ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಜುಲೈ 19ರಂದು ದೇಗುಲದಲ್ಲಿ ಪೂಜಾ ಸೇವೆಗಳಿಗೆ ರಾಜ್ಯ ಸರ್ಕಾರ ಜಿಲ್ಲಾಡಳಿತ ಅವಕಾಶ ನೀಡಿತ್ತು. ಜೊತೆಗೆ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯೂ ಏರಿಕೆಯಾಗಿ , ದೇಗುಲ ಬಳಿಯಿರುವ ಟೆಂಗಿನಕಾಯಿ ವ್ಯಾಪಾರಸ್ಥರ ಬದುಕು ಸುಧಾರಿಸುವ ಹೊತ್ತಲ್ಲೇ ಇದೀಗ ಮೂರನೇ ಅಲೆ ಮಹಾರಾಷ್ಟ್ರ, ಕೇರಳದಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಬಿಗಿ ಕ್ರಮಕ್ಕೆ ಮುಂದಾಗಿದೆ.
ದೇಗುಲಗಳಿಗೆ ಪ್ರವೇಶ, ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.ಆದರೆ ಪೂಜಾ ಸೇವೆಗಳಿಗೆ ನಿರ್ಬಂಧ ಹೇರಿ ಬಾಗಲಕೋಟೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು. ಆದೇಶದಂತೆ ಬಾದಾಮಿ ಬನಶಂಕರಿ ದೇಗುಲದಲ್ಲಿ ಧಾರ್ಮಿಕ ಸೇವೆಗೆ ಬ್ರೇಕ್ ಬಿದ್ದಿದೆ. ಜೊತೆಗೆ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಬರುವವ ಭಕ್ತರ ಸಂಖ್ಯೆಯೂ ವಿರಳವಾಗಿದೆ. ಕೋವಿಡ್ ನಿಂದಾಗಿ ಮತ್ತೆ ಭಕ್ತರು ದೇವರಿಗೆ ಮೊರೆಯಿಡುವುದು.ಹರಿಕೆ ಪೂಜಾ ಸೇವೆಗಳಿಗೆ ನಿರ್ಬಂಧ ಬಿದ್ದಿದ್ದು, ಕೇವಲ ದೇವರಿಗೆ ಕೈಮುಗಿಯುವಂತಾಗಿದೆ.
ಮೂರನೇ ಅಲೆ ಭೀತಿ ಇದೀಗ ದೇಗುಲಕ್ಕೆ ಬರುವ ಭಕ್ತರಿಗೂ ತಟ್ಟಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ಬಾದಾಮಿ ಬನಶಂಕರಿ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಇಳಿಕೆಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ದೇಗುಲ ದರ್ಶನಕ್ಕೆ ಮಾತ್ರ ಅವಕಾಶವಿದೆ ಎಂದು ಅರ್ಚಕ ಮಹೇಶ್ ಪೂಜಾರಿ ತಿಳಿಸಿದರು.
ಇನ್ನು ಮಂಗಳವಾರ ಬಾದಾಮಿ ಬನಶಂಕರಿ ದೇವಿ ವಾರವಾಗಿರುವದರಿಂದ ಸಾಮಾನ್ಯ ದಿನಗಳಲ್ಲಿ ಭಕ್ತರ ದಂಡೇ ಇರುತ್ತಿತ್ತು. ಆದರೆ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇದೀಗ ದೇಗುಲದತ್ತ ಭಕ್ತರು ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.




