ಈ ಸೋಲಾರ್ ಡ್ರಯರ್ ತಯಾರಿಸಿದ್ದು ಹೊನ್ನೆಮರದಹಳ್ಳಿ ಸಾಫ್ಟ್ವೇರ್ ಇಂಜಿನಿಯರ್

ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ. ಮಳೆಗಾಲದ ವೇಳೆ ಅಡಿಕೆ ಒಣಗಿಸಲು ಬೆಳೆಗಾರರು ಪರದಾಡುವುದು ಅಷ್ಟಿಷ್ಟಲ್ಲ. ಈಗ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಯಂತ್ರವೊಂದು ಆವಿಷ್ಕರಿಸಿದ್ದು, ಅಡಿಕೆ ಬೆಳೆಗಾರರಿಗೆ ಅನುಕೂಲ ಆಗಲಿದೆ.
ಹೌದು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಮರದಹಳ್ಳಿಯ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಖಡ್ಗ ಸಂಘಟನೆಯ ಪ್ರಮುಖರಾದ ಬಿ. ಆರ್. ರಘು ಅಡಿಕೆ ಬೇಯಿಸಲು ಪರಿಸರ ಸ್ನೇಹಿಯಾದ “ಸೋಲಾರ್ ಡ್ರಯರ್” ತಯಾರಿಸಿದ್ದು, ಇದು ರೈತರಿಗೆ ವರದಾನ ಆಗಲಿದೆ.

ಮೂರು ಅಡಿ ಉದ್ದದ ಪೆಟ್ಟಿಗೆ ಆಕಾರದ ಡ್ರಯರ್ ಇದ್ದು, ನಾಲ್ಕು ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಮರದ ಕಾರ್ಡ್ ಬೋರ್ಡ್ ನಿಂದ ಆವೃತವಾಗಿರುವ ಇದಕ್ಕೆ ಹೊರಭಾಗದಿಂದ ಕಪ್ಪು ಬಣ್ಣ ಬಳಿಯಲಾಗಿದೆ. ಒಳಗಡೆ ಅಲ್ಯುಮಿನಿಯಂ ಹಾಳೆಗಳಿಂದ ಕಾರ್ಡ್ ಬೋರ್ಡ್ ಹೊದಿಕೆ ಮಾಡಲಾಗಿದೆ. ಮೇಲ್ಭಾಗದಲ್ಲಿ ತೆರೆದ ನಾಲ್ಕು ಅಂಚಿನಲ್ಲಿ ನಿಕ್ರೋಮ್ ಶೀಟ್ ಗಳ ಅಳವಡಿಕೆ ಮಾಡಲಾಗಿದೆ. ಮುಕ್ಕಾಲು ಇಂಚು ದಪ್ಪವಾಗಿರುವುದನ್ನು ಮುಚ್ಚಳದ ಭಾಗದಲ್ಲಿ ಅಳವಡಿಕೆ ಮಾಡಲಾಗಿದೆ.
ಗಾಜಿನ ಮೇಲೆ ನಿಕ್ರೋಮ್ ಶೀಟ್ ಗಳು ಬೆಳಕಿನ ಪ್ರತಿಫಲ ಉಂಟು ಮಾಡುತ್ತದೆ. ಇದರಿಂದಾಗಿ ಬೆಳಕಿನ ವಕ್ರೀಭವನದ ಮೂಲಕ ಒಳ ಪ್ರವೇಶಿಸುತ್ತದೆ. ಒಳಗೋಡೆಯಲ್ಲಿ ಅಲ್ಯುಮಿನಿಯಮ್ ಹಾಳೆಗಳಿಂದ ಹಲವು ಬಾರಿ ಪ್ರತಿಫಲನ ಆಗುವುದರಿಂದ ಉಷ್ಣಾಂಶ ಜಾಸ್ತಿಯಾಗುತ್ತದೆ. ಹೊರಭಾಗದಿಂದ ಕಪ್ಪು ವಸ್ತುವು ಸೂರ್ಯನ ಕಿರಣಗಳಿಂದ ಉಷ್ಣವನ್ನು ಪಡೆಯುತ್ತದೆ. ಸಾಧನದ ಒಳಭಾಗದಲ್ಲಿ ಸುಮಾರು 200 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ಹೆಚ್ಚಾಗುತ್ತದೆ.

ಈಗ ಅಡಿಕೆ ಧಾರಣೆ ಹೆಚ್ಚಾಗುತ್ತಿದೆ. ರೈತರಲ್ಲಿಯೂ ಸಂತಸ ಮೂಡಿದೆ. ಆದ್ರೆ ಈಗ ಕೊಯ್ಲು ಶುರುವಾಗಿದೆ. ಅಡಿಕೆ ಬೇಯಿಸುವುದು ಹಾಗೂ ಒಣಗಿಸುವುದೇ ದೊಡ್ಡ ಸಮಸ್ಯೆ. ಯಾಕೆಂದರೆ ಮಳೆ ಬಂತೆಂದರೆ ಸಂಪೂರ್ಣ ತೊಯ್ದುಹೋಗುತ್ತೆ. ಮತ್ತೆ ಬಿಸಿಲು ಬರುವವರೆಗೆ ಕಾಯಬೇಕು. ಇದಕ್ಕೆ ಈಗ ಪರಿಹಾರ ಸಿಗುವ ಲಕ್ಷಣ ಗೋಚರಿಸುತ್ತಿದೆ.
ಈ ವಿಚಾರ ಮನಗಂಡು ಚನ್ನಗಿರಿ ತಾಲೂಕಿನ ಅವರು ಮಾತ್ರವಲ್ಲ ಕೇವಲ 15 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಿಸಿರುವುದು ವಿಶೇಷ. ಇವರ ಈ ಆವಿಷ್ಕಾರಕ್ಕೆ ಸಹೋದರರಾದ ನಾಗರಾಜ್, ಮಲ್ಲಿಕಾರ್ಜುನ್ ಸಾಥ್ ನೀಡಿದ್ದಾರೆ.
ಇನ್ನು ಸುಲಿದ ಅಡಿಕೆ ಗೋಟುಗಳನ್ನು ನೇರವಾಗಿ ಈ ಯಂತ್ರಕ್ಕೆ ಹಾಕಬಹುದು. ಇನ್ನು ಬೇಯಿಸಲಿಕ್ಕೆ ನೀರು ಕೂಡ ಅವಶ್ಯಕತೆ ಇಲ್ಲ. ಡ್ರಯರ್ ನಲ್ಲಿ ಎರಡರಿಂದ ಮೂರು ದಿನಗಳಲ್ಲಿ ಅಡಿಕೆ ಪೂರ್ತಿಯಾಗಿ ಬೆಂದು ಒಣಗಿ ಅಡಿಕೆ ಸಿಗುತ್ತದೆ ಎನ್ನುತ್ತಾರೆ ಇದನ್ನು ಆವಿಷ್ಕರಿಸಿರುವ ರಘು.




