ಕೈಕೊಟ್ಟ ಪ್ರಿಯತಮೆ: ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಪ್ರಿಯಕರ…!

ದಾವಣಗೆರೆ: ತಾನು ಪ್ರೀತಿ ಮಾಡಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿ ಇರುವ ರೈಲ್ವೆ ಟ್ರಾಕ್ ಬಳಿ ನಡೆದಿದೆ.
ಎಚ್ಕೆಆರ್ ಸರ್ಕಲ್ ಬಳಿಯ ಹೊಸ ಲೆನಿನ್ನಗರದ 24 ವರ್ಷದ ಯುವಕ ಮಹಾಂತೇಶ್ ಆತ್ಮಹತ್ಯೆಗೆ ಶರಣಾದ ಯುವಕ.
ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಯುವಕನಿಗೆ ಅಲ್ಲೇ ಯುವತಿಯೊಬ್ಬಳ ಪರಿಚಯವಾಗಿದ್ದು, ಪ್ರೀತಿಗೆ ತಿರುಗಿತ್ತು.
ಆದ್ರೆ “ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿಯೇ ಕಾರಣ ಎಂದು ವಾಟ್ಸ್ಪ್ ಸ್ಟೇಟಸ್ಗೆ ಹಾಕಿ ಫ್ಯಾಕ್ಟರಿ ಬಳಿಯೇ ಇದ್ದ ರೈಲ್ವೆ ಟ್ರ್ಯಾಕ್ಗೆ ಅಡ್ಡ ಮಲಗಿದ್ದಾನೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೃತದೇಹ ರಕ್ತಸಿಕ್ತವಾಗಿತ್ತು.
ಕಳೆದ ಮೂರು ದಿನಗಳಿಂದ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಮನೆಗೆ ಅವನೇ ಆಧಾರಸ್ಥಂಭವಾಗಿದ್ದ. ಯಾವುದೋ ಹುಡುಗಿಗೋಸ್ಕರ ರೈಲಿಗೆ ತಲೆಕೊಟ್ಟು ಜೀವ ಕಳೆದುಕೊಂಡಿದ್ದಾನೆ. ಈಗ ನಮಗೆ ಯಾರು ದಿಕ್ಕು ಎಂದು ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




