ಕೇಂದ್ರ ಸಚಿವರ ಮಗಳ ಮದುವೆಯಲ್ಲಿ ಕೊರೊನಾ ರೂಲ್ಸ್ ಬ್ರೆಕ್: ಕ್ರಮ ಕೈಗೊಳ್ಳುತ್ತಾ ಧಾರವಾಡ ಜಿಲ್ಲಾಡಳಿತ..?

ಧಾರವಾಡ : ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಆದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಮದುವೆಯಲ್ಲಿ ಕೊರೊನಾ ರೂಲ್ಸ್ ಉಲ್ಲಂಘನೆಯಾದರೂ ಕೂಡಾ ಸ್ಥಳೀಯ ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸಲು ಹಾಗೂ ಕೊರನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ದಿನಕ್ಕೊಂದು ಕಠಿಣ ಕಾನೂನು ಜಾರಿ ಮಾಡುತ್ತಿವೆ. ಇತ್ತ ಗಣೇಶ ಹಬ್ಬಕ್ಕೂ ಕೊರೊನಾ ನೆಪ ಹೇಳಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದಲಾಗಿತ್ತು. ಅಷ್ಟೇಯಲ್ಲದೆ ಸಭೆ, ಸಮಾರಂಭ, ಮದುವೆಗಳಿಗೆ ಇಂತಿಷ್ಟೇ ಜನರು ಸೇರಿಕೊಂಡು ಸರಳವಾಗಿ ಆಚರಣೆ ಮಾಡಲು ಅವಕಾಶ ನೀಡಲಾಗಿದ್ದು, ಆದರೆ ಪ್ರಹ್ಲಾದ್ ಜೋಶಿ ಅವರ ಮಗಳ ಆಡಂಬರದ ಮದುವೆಯಲ್ಲಿ ಗಣ್ಯಾತೀಗಣ್ಯರು ಸೇರಿದಂತೆ ನೂರಾರು ಜನರು ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ವಿವಾಹದಲ್ಲಿ ಭಾಗಿಯಾಗಿರುವುದನ್ನು ಅಲ್ಲಿಯ ಪೊಟೋ ವಿಡಿಯೋಗಳು ಸಾರಿ ಹೇಳುತ್ತಿವೆ.
ಇದನ್ನೂ ಓದಿ : ಜೋಶಿ ಕುಟುಂಬ ಮದುವೆ ಸಮಾರಂಭದಲ್ಲಿ ಕೇಂದ್ರ, ರಾಜ್ಯ ನಾಯಕರು ಭಾಗಿ: ನವದಂಪತಿಗಳಿಗೆ ಶುಭಕೋರಿದ ಗಣ್ಯರು
ಇಷ್ಟಿದ್ದರು ಕ್ರಮಕೈಗೊಳ್ಳಬೇಕಾದ ಧಾರವಾಡ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳೇ ನಗರದ ಅರ್ಬನ್ ಓಯಾಸಿಸ್ ಶಾಪಿಂಗ್ ಮಾಲ್ ನಲ್ಲಿ ದಂಪತಿಗಳಿಬ್ಬರು ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಅವರಿಂದ, ಫೈನ್ ತುಂಬಿಸಿಕೊಂಡು ಮೇಲೆಯೇ ಅವರನ್ನು ಸ್ಥಳದಿಂದ ಕಳಿಸಿದ್ದರು. ಆದರೆ ಇದೀಗ ಕೇಂದ್ರ ಸಚಿವರು ಮಗಳ ಅರಕ್ಷತೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮವನ್ನೇ ಗಾಳಿಗೆ ತೂರಿದರು ಸಹಿತ ಯಾವುದೇ ಕ್ರಮಕ್ಕೆ ಜಿಲಾಡಳಿತ ಮುಂದಾಗದೇ ಇರುವುದು ವಿಪರ್ಯಾಸ ಎನ್ನುವುದು ಅವಳಿನಗರದ ಜನತೆಯ ಮಾತಾಗಿದೆ.
ಈ ಕುರಿತು ಮಾಧ್ಯಮದವರು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಿದರೇ, ಈ ಬಗ್ಗೆ ತುಟಿ ಬಿಚ್ಚದೇ ಇರುವುದು ನೋಡಿದರೇ ಕಾನೂನುಗಳು ಕೇವಲ ಬಡವರಿಗೆ, ಶ್ರೀಮಂತರಿಗೆ ಅಲ್ಲಾ ಎನ್ನವುದು ಎತ್ತಿ ತೋರುತ್ತಿದ್ದೆ.
