ಪ್ರವಾಹ ಮತ್ತು ಅತಿವೃಷ್ಟಿ ವಿಷಯದ ಬಗ್ಗೆ ಚರ್ಚಿಸದ ಕರಾವಳಿ ಭಾಗದ ಶಾಸಕರು: ಯು ಟಿ ಖಾದರ್ ಬೇಸರ

ಬೆಳಗಾವಿ: ಕರಾವಳಿಯಲ್ಲಿ 15 ಮಂದಿ ಶಾಸಕರಿದ್ದರು ಪ್ರವಾಹ ಮತ್ತು ಅತಿವೃಷ್ಟಿ ಅನಾಹುತಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಯಾರೊಬ್ಬರು ಚರ್ಚೆ ಮಾಡುತ್ತಿಲ್ಲ. ನಾನೊಬ್ಬನೆ ಮಾತನಾಡಬೇಕಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ತೀವ್ರ ಬೇಸರ ವ್ಯಕ್ತಪಡಿಸಿದ ಘಟನೆ ಗುರುವಾರ ವಿಧಾನಸಭೆಯಲ್ಲಿ ನಡೆಯಿತು.
ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಚಾರ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ವಿಪರೀತ ಮಳೆ ಪರಿಣಾಮವಾಗಿ ರೈತರು ಕಟಾವು ಮಾಡಿದ ಭತ್ತ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಲು ಆಗಲಿಲ್ಲ. ಹಿಂದಿನ ಸರ್ಕಾರ ಭತ್ತಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದರೆ, ಈಗಿನ ಸರ್ಕಾರ ಅದನ್ನು ರದ್ದುಪಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯೂ ನಾಶವಾಗಿದೆ. ಬಂದ ಅಲ್ಪಸ್ವಲ್ಪ ಬೆಳೆಗೆ ಬೆಲೆಯೂ ಇಲ್ಲದಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಅಡಿಕೆ ಬೆಳೆಗೆ ಪರಿಹಾರ ಕೊಟ್ಟಿತ್ತು. ಈಗಿನ ಸರ್ಕಾರವೂ ಅದೇ ಮಾದರಿ ಅನುಸರಿಸಿ ಪರಿಹಾರ ಕೊಡಬೇಕು ಎಂದು ಖಾದರ್ ಆಗ್ರಹಿಸಿದರು.
ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ವ್ಯಾಪಕ ಬೆಳೆಹಾನಿಯಾಗಿದೆ. ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ಸಮುದ್ರದ ನೀರು ನುಗ್ಗಿ, ಗದ್ದೆಗಳಲ್ಲಿ ಉಪ್ಪು ಮಿಶ್ರಿತ ನೀರು ನುಗ್ಗಿ, ಬೆಳೆಗಳು ಹಾಳಾಗಿವೆ ಎಂದು ಅವರ ಸರ್ಕಾರ ಗಮನಸೆಳೆದರು. ನದಿ ಬದಿಯ ಜಾಗ ರಕ್ಷಿಸಿ, ವಿಶೇಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.




