ಕೊಡಗು-ಕೇರಳ ಗಡಿಭಾಗ ತೆರವಿಗೆ ಜಿಲ್ಲಾ ಕಾಂಗ್ರೆಸ್ ಒತ್ತಾಯ: ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಕೊಡಗು : ಕೋವಿಡ್ ಇಳಿಮುಖವಾದ ಹಿನ್ನೆಲೆ ಕೊಡಗು – ಕೇರಳ ಗಡಿ ಭಾಗವನ್ನು ಗ್ರಾಮಸ್ಥರ ಹಿತದೃಷ್ಟಿಯಿಂದ ತೆರವುಗೊಳಿಸಿ ಮುಕ್ತಗೊಳಿಸುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ರಾಜ್ಯ ಸರ್ಕಾರ ನಿರ್ಬಂಧಗಳನ್ನು ಸಡಿಲಿಸಿ ಎಲ್ಲಾ ಮಾರ್ಗಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಕೊಡಗು ಜಿಲ್ಲಾಡಳಿತ ಹಾಗೂ ಶಾಸಕರು ಸರ್ಕಾರದ ಆದೇಶ ಪಾಲನೆ ಮಾಡದೇ ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡುತಿದ್ದಾರೆ ಎಂದು ಆರೋಪಿಸಿದರು.
ಗಡಿ ಪ್ರವೇಶ ಮಾಡುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ವರದಿ ಮತ್ತು ಎರಡು ವ್ಯಾಕ್ಸಿನ್ ಕಡ್ಡಾಯಗೊಳಿಸಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ, ಕೊಡಗು ಜಿಲ್ಲೆಯ ಗಡಿಭಾಗವಾದ ಮಾಕುಟ್ಟ ಮತ್ತು ಕುಟ್ಟ ಭಾಗವನ್ನು ಪ್ರವೇಶಕ್ಕೆ ಮುಕ್ತವಾಗಿಸದೆ ಜನಸಾಮಾನ್ಯರು ನಿತ್ಯ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದರು.
ಕೇರಳ ರಾಜ್ಯಕ್ಕೆ ತುರ್ತು ಸಂದರ್ಭಕ್ಕೆ ತೆರಳಲು, ವಾಣಿಜ್ಯ ಉಪಯೋಗಿ, ಪ್ರಯಾಣಿಕ ವಾಹನಗಳು ಸೇರಿದಂತೆ ಉಬಯ ರಾಜ್ಯಗಳ ಬೊಕ್ಕಸಕ್ಕೆ ಹೊಡೆತಬಿದ್ದಿದೆ. ಉಬಯ ರಾಜ್ಯಗಳ ಖಾಸಾಗಿ ಮತ್ತು ಸರ್ಕಾರಿ ಬಸ್ಸುಗಳ ಸಂಚಾರವು ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟಕ್ಕಿಡಾಗಿದ್ದಾರೆ. ಗಡಿ ಪ್ರದೇಶದ ಕರ್ತವ್ಯದಲ್ಲಿರುವ ಅಧಿಕಾರಿಗಳು ಮನಬಂದಂತೆ ವರ್ತನೆ ಮಾಡುತಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯದ ಎಲ್ಲಾ ಅಂತರ್ ರಾಜ್ಯ ಗಡಿಭಾಗವನ್ನು ಮುಕ್ತಮಾಡಿರುವಂತೆ ಕೊಡಗು ಜಿಲ್ಲೆಯ ಗಡಿಭಾಗವನ್ನು ಮುಕ್ತಗೊಳಿಸುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಕೊಡಗು ಜಿಲ್ಲೆ ಗಡಿಭಾಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾರ್ವಜನಿಕರನ್ನು ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಶಿಕ್ಷಕರ ಕ್ಷೇತ್ರದ ಅಧ್ಯಕ್ಷ ನರೇಂದ್ರ ಕಾಮಾತ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ಸನ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪೃಥ್ವಿನಾಥ್ ಹಾಜರಿದ್ದರು.




