ರಾಜ್ಯಾದ್ಯಂತ ಶೀತಗಾಳಿ, ಮಳೆ: ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ

ಬೆಂಗಳೂರು: ಆಗ್ನೇಯ ಬಂಗಾಳ ಕೊಲ್ಲಿ ಯಲ್ಲಿ ವಾಯುಭಾರ ಕುಸಿತವಾಗಿ ಮ್ಯಾಂಡಾಸ್ ಚಂಡಮಾರುತದ ರೂಪ ತಳಿದ ಪರಿಣಾಮ ನೆರೆಯ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಇದರ ಪರಿಣಾಮ ಕರ್ನಾಟಕ ರಾಜ್ಯದ ಮೇಲೂ ಬಿದ್ದಿದ್ದರಿಂದ ರಾಜ್ಯಾದ್ಯಂತ ಅಲ್ಲಲ್ಲಿ ತುಂತುರು ಮಳೆ ಹಾಗೂ ಶೀತಗಾಳಿ ಬೀಸುತ್ತಿದೆ. ಇದು ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಶೀತಗಾಳಿ, ಮಳೆಯಿಂದಾಗಿ ಅನೇಕರು ಶೀತ, ಕೆಮ್ಮು, ನೆಗಡಿ ಅಂತ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದಾರೆ.
ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಯು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಎದುರಾಗುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್ ಭೀತಿಯನ್ನು ಹೆಚ್ಚಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ , ಚಳಿ, ಶೀತಕ್ಕೂ ಕೋವಿಡ್ ಸೋಂಕಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಚಳಿಗಾಲದ ಜೊತೆ ಚಂಡಮಾರುತದ ಎಫೆಕ್ಟ್ ಇದೆ. ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು. ಪೋಷಕರು, ವೃದ್ಧರನ್ನ, ಮಕ್ಕಳನ್ನ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ವೈದ್ಯರಿಗೂ ಎಚ್ಚರಿಕೆವಹಿಸಲು ಸಭೆ ಕರೆದು ಸೂಚಿಸುತ್ತೇನೆ. ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದಲೂ ಮಾರ್ಗಸೂಚಿ ಹೊರಡಿಸಿದ್ದೇವೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ಮುಂಜಾಗ್ರತಾ ಕ್ರಮ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ. ಈಗ ಸಭೆ ಕರೆದು ವೈದ್ಯರಿಗೂ ಸೂಚನೆ ಕೊಡುತ್ತೇನೆ. ಈ ವೆದರ್ನಿಂದ ಕೋವಿಡ್ ಉಲ್ಬಣವಾಗುವುದಿಲ್ಲ. ಆದರೆ ದೇಹವನ್ನು ತುಂಬಾ ಬೆಚ್ಚಗೆ ಕಾಪಾಡಿಕೊಳ್ಳಬೇಕು. ಈಗಾಗಲೇ ಕೆಲವು ಕಡೆ ಶಾಲೆಗಳಿಗೂ ರಜೆ ನೀಡಲಾಗಿದೆ. ನಾವೂ ಕೂಡ ತುಂಬಾ ಮುಂಜಾಗ್ರತೆವಹಿಸಿದ್ದೇವೆ ಎಂದರು.
