ಚಿಕ್ಕಮಗಳೂರು
ಅಕ್ರಮ ಮರಳು ಸಾಗಾಟ; ಅರಣ್ಯ ಇಲಾಖೆಯ ಅಧಿಕಾರಿಗಳೇ ಶಾಮೀಲು?

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಬಳಿ ಹೇಮಾವತಿ ನದಿಪಾತ್ರದ ಸ್ಥಳದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುವವರೊಂದಿಗೆ ಅರಣ್ಯ ಇಲಾಖೆ ಶಾಮೀಲಾಗಿರುವ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಟ್ರಾಕ್ಟರ್ ಮೂಲಕ ಅಕ್ರಮ ಮರಳು ಸಾಗಣೆಗೆ ಅರಣ್ಯ ಇಲಾಖೆಯವರು ಸಾಥ್ ನೀಡಿರುವ ದೃಶ್ಯ ವೈರಲ್ ಆಗಿದೆ. ಉಪ ವಲಯ ಅರಣ್ಯಾಧಿಕಾರಿ ರಮೇಶ್ ನೇತೃತ್ವದಲ್ಲಿ ಮರಳು ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ವಿಡಿಯೋ ಮಾಡಿರುವ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದು, ಈವರೆಗೆ ಒಂದು ಹಿಡಿಯಷ್ಟೂ ಅಕ್ರಮ ಮರಳನ್ನು ಹಿಡಿಯದ ಈ ಅಧಿಕಾರಿಗೇ ಕಳೆದ ಬಾರಿ ಸೇವಾ ಪ್ರಶಸ್ತಿಯನ್ನು ನೀಡಿ ಜಿಲ್ಲಾಡಳಿತ ಗೌರವಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಧಿಕಾರಿಗಳ ವರ್ತನೆ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.




