ಚಿಕ್ಕಮಗಳೂರು: ರಸ್ತೆಬದಿ ವಾಹನ ನಿಲುಗಡೆ ನಿಷೇಧ ಆದೇಶ ಹಿಂಪಡೆಯುವಂತೆ ಕರವೇ ಆಗ್ರಹ

ಚಿಕ್ಕಮಗಳೂರು: ನಗರದ ಮುಖ್ಯರಸ್ತೆಯಾಗಿರುವ ಐ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ವಿಧಿಸಿರುವ ನಿಷೇಧ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕಿರಿದಾಗಿರುವ ಇಂದಿರಾಗಾಂಧಿ ರಸ್ತೆಯ ನಡುವೆ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಾಣ ಮಾಡಿರುವುದರಿಂದ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಹಿಂದಿನಿಂದಲೂ ಐ ಜಿ ರಸ್ತೆಯ ಬದಿಗಳಲ್ಲಿ ಎಲ್ಲಾ ವಾಹನಗಳ ನಿಲುಗಡೆಗೆ ಅವಕಾಶವಿತ್ತು. ಈಗ ಏಕಾಏಕಿ ನಿಷೇಧಿಸಿರುವುದರಿಂದ ವಾಹನಗಳ ನಿಲುಗಡೆಗೆ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗಿದೆ. ನಗರದ ವಸತಿ ಗೃಹಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಂತಹ ವಸತಿಗೃಹಗಳು ರಸ್ತೆಬದಿಯ ಜಾಗವನ್ನು ವಾಹನ ನಿಲುಗಡೆಗೆ ಬಳಸದೆ, ಪರ್ಯಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾಂಪ್ಲೆಕ್ಸ್ ಗಳ, ವಸತಿಗೃಹಗಳ ಪರವಾನಗಿ ರದ್ದುಗೊಳಿಸಬೇಕು. ಕೆಲ ವಾಹನಗಳು ದಿನಗಟ್ಟಲೆ ರಸ್ತೆಬದಿಗಳಲ್ಲಿ ನಿಲುಗಡೆಗೊಳಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು. ಇಂತಹ ಕ್ರಮ ಜರುಗಿಸದೆ, ಪಾರ್ಕಿಂಗ್ ವ್ಯವಸ್ಥೆಯನ್ನೇ ನಿಷೇಧಿಸಿರುವುದು ಸರಿಯಲ್ಲ. ಐ ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರವೇ ಅಧ್ಯಕ್ಷ ತೇಗೂರು ಜಗದೀಶ್ ಮತ್ತು ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.




