ಚಿಕ್ಕಮಗಳೂರು
ಆ್ಯಸಿಡ್ ಎರಚಿದ್ದ ಆರೋಪ ಸಾಬೀತು; ನಾಲ್ವರಿಗೂ ಜು.15ಕ್ಕೆ ಶಿಕ್ಷೆ ಪ್ರಕಟ

ಚಿಕ್ಕಮಗಳೂರು: ಯುವತಿಯೋರ್ವಳ ಮೇಲೆ ನಾಲ್ವರು ಆರೋಪಿಗಳು ಆಸಿಡ್ ಎರಚಿದ ಪ್ರಕರಣವು ಎರಡನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಇಂದು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳ ಕುಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಜು.15ರಂದು ಶಿಕ್ಷೆ ಪ್ರಕಟವಾಗಲಿದೆ.
ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿಯೋರ್ವಳ ಮೇಲೆ ಕಳೆದ 2015 ಏಪ್ರಿಲ್ 18ರಂದು ಮೆಣಸೆಯಲ್ಲಿ ನಾಲ್ವರು ದುಷ್ಕರ್ಮಿಗಳು ಆಸಿಡ್ ಎರಚಿದ್ದರು.
ಗಣೇಶ್, ಕಬೀರ್, ಮಜೀದ್ ಹಾಗೂ ಪಾಲ್ ಪಿಂಟೋ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದರು. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸರ್ಕಾರದ ಪರ ವಕೀಲೆ ಮಮತಾ ವಾದ ಮಂಡಿಸಿದ್ದರು.




