ಕೃಷಿ ಕಾಯ್ದೆಗೆ ವಿರೋಧ ಮಾಡುತ್ತಿರುವವರು ರೈತರಲ್ಲ: ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ

ಕಲಬುರಗಿ: ಕೇಂದ್ರ ಸಚಿವ ಭಗವಂತ ಖೂಬಾ ಜನಾಶಿರ್ವಾದ ಯಾತ್ರೆ ಮುಂದುವರಿಸಿದ್ದಾರೆ. ಇಂದು ಬಿಸಿಲೂರು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಭಗವಂತ ಖೂಬಾ ಅವರು ಜನಾಶಿರ್ವಾದ ಯಾತ್ರೆ ಅದ್ದೂರಿಯಾಗಿ ಜರುಗಿತು.
ಭಗವಂತ ಖೂಬಾ ಕೇಂದ್ರ ಸಚಿವರಾದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಾಶಿರ್ವಾದ ಯಾತ್ರೆ ಮುಂದುವರಿಸಿದ್ದಾರೆ. ಆಳಂದ ಪಟ್ಟಣದಲ್ಲಿ ಖೂಬಾ ಆಗಮಿಸುತ್ತಿದ್ದಂತೆ ಕಮಲ ಪಡೆ ಮುಖಂಡರು, ಕಾರ್ಯಕರ್ತರು ಎರಡು ಜೆಸಿಬಿ ಮೂಲಕ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ರು. ಜನಾಶಿರ್ವಾದ ಯಾತ್ರೆ ಹಿನ್ನೆಲೆ ಆಳಂದ ಪಟ್ಟಣದ ತಹಶೀಲ್ ಕಚೇರಿಯಿಂದ ಪ್ರವಾಸಿ ಮಂದಿರ ವರೆಗೆ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸಿದ್ರು. ರ್ಯಾಲಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಜನ ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ರು. ಆದ್ರೆ ಜನಾಶಿರ್ವಾದ ಯಾತ್ರೆಯಲ್ಲಿ ಈ ಹಿಂದಿನಂತೆ ಕೋವಿಡ್ ರೂಲ್ಸ್ ಕಂಪ್ಲೀಟ್ ಉಲ್ಲಂಘನೆ ಮಾಡಿರೋದು ಕಂಡು ಬಂತು.
ಆಳಂದ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದ ಬಳಿಕ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಜನಾಶಿರ್ವಾದ ಯಾತ್ರೆಯ ಬಹಿರಂಗ ಸಭೆ ನಡೆಸಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾತಾಡಿದ್ರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರೋಧ ಬಗ್ಗೆ ಮಾತಾಡಿದ ಸಚಿವ ಖೂಬಾ, ರೈತರಿಗೆ ಅನುಕೂಲ ಆಗುವ ಕೃಷಿ ಕಾಯ್ದೆಗಳು ಜಾರಿಗೆ ತರಲಾಗಿದೆ. ಆದ್ರೆ ಕಾಂಗ್ರೆಸ್ ಸೇರಿ ವಿವಿಧ ರಾಜಕೀಯ ಪಕ್ಷದವರು, ಸಂಘಟನೆಗಳು ರೈತರ ಮಾರುವೇಷ ಧರಿಸಿ ಹೋರಾಟ ಮಾಡುತ್ತ ಕೃಷಿ ಕಾಯ್ದೆಗಳನ್ನು ವಿರೋಧ ಮಾಡ್ತಿದ್ದಾರೆ. ಆದ್ರೆ ರೈತರು ವಿರೋಧ ಮಾಡದೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೋದಿ ಸರ್ಕಾರದಲ್ಲಿ ರೈತರ ಉತ್ಪನ್ನಗಳಿಗೆ ಉತ್ತಮ ರೀತಿಯಲ್ಲಿ ಬೆಂಬಲ ಬೆಲೆ ದೊರೆಯುತ್ತಿದೆ. ಕೃಷಿ ಕಾಯ್ದೆಗಳಿಗೆ ವಿರೋಧ ಮಾಡಿದ್ರೆ ಮಾಡಲಿ, ಕಾಯ್ದೆಗಳು ರೈತರಿಗೆ ಅನುಕೂಲ ಇವೆ. ಹೀಗಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಾತೆ ಇಲ್ಲ ಅಂತಾ ಖೂಬಾ ಹೇಳಿದ್ರು.
ಕೇಂದ್ರ ಸಚಿವ ಭಗವಂತ ಖೂಬಾ ಕೈಗೊಂಡಿರುವ ಜನಾಶಿರ್ವಾದ ಯಾತ್ರೆಯ ಎಲ್ಲಾ ಕಡೆಗಳಲ್ಲೂ ಕೋವಿಡ್ ನಿಯಮಗಳು ಉಲ್ಲಂಘನೆ ಆಗಿರೋದು ಸಾರ್ವಜನಿಕರ ಟಿಕೆಗೆ ಕಾರಣವಾಗಿದೆ. ಇವತ್ತು ಕೂಡ ಖುದ್ದು ಖೂಬಾ ಅವರೆ ಮಾಸ್ಕ್ ಧರಿಸದೆ ಕೊರೊನಾ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಜಾರಿ ಮಾಡಿರುವ ಕೊರೊನಾ ರೂಲ್ಸ್ ಜನಪ್ರತಿನಿಧಿಗಳಿಗೆ ಅಪ್ಲೈ ಆಗಲ್ವಾ ಅಂತಾ ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.




