ಭೂಸಮಸ್ಯೆ ಬಗೆಹರಿಸಿಕೊಡಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಭೂಮಿಗಳ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು, ಭೂಸಮಸ್ಯೆಗಳಿಗೆ ಸೂಕ್ತ ಕ್ರಮ ಜರುಗಿಸಿ ಅಕ್ರಮವಾಗಿ ಭೂಕಬಳಿಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘರ್ಷಕ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ನಿವೇಶನಗಳನ್ನು ಹಂಚಿ ಹಕ್ಕು ಪತ್ರ ನೀಡಬೇಕು, ಪ್ರಭಾವಿಗಳಿಂದ ಬಡವರ ಜಮೀನುಗಳನ್ನು ರಕ್ಷಿಸಬೇಕು, ರಾಮನಾಥಪುರದಲ್ಲಿ ದಲಿತರಿಗೆ ಸ್ಮಶಾನಕ್ಕಾಗಿ ಜಮೀನು ಕಾಯ್ದಿರಿಸಬೇಕು, ಕುಂದಾಣ ಹೋಬಳಿಯ ಇಲ್ತೊರೆ ಗ್ರಾಮದ ಸರ್ವೇ ನಂ 46 ರಲ್ಲಿ ಇರುವ 3 ಎಕರೆ ಜಮೀನಿನ ಮೂಲ ಮತ್ತು ಅರ್ಹ ದಾಖಲೆಗಳನ್ನು ಹೊಂದಿರುವ ಬಡ ಪರಿಶಿಷ್ಟ ಸಾಗುವಳಿದಾರರಿಗೆ ಪೋಲಿಸ್ ರಕ್ಷಣೆ ನೀಡಿ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಸರ್ವೇ ನಂ 45 ರಲ್ಲಿ ಇರುವ ನಾಲ್ಕು ಎಕರೆ ಜಮೀನನ್ನು ಗುಜರಾತ್ ನ ಶ್ರೀಮಂತ ಉದ್ಯಮಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ಕೂಡಲೇ ರದ್ದು ಮಾಡಿ ಪ್ರಕರಣವನ್ನು ತನಿಖೆ ನಡೆಸಬೇಕು ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆ ಸರ್ವೇ ನಂ 62 ರಲ್ಲಿ 22 ಎಕರೆ 31 ಕುಂಟೆ ಜಮೀನಿದ್ದು ಹಿಂದುಗಳ ಸ್ಮಶಾನಕ್ಕಾಗಿ ಒಂದು ಎಕರೆ ಮತ್ತು ಮುಸ್ಲಿಮರ ಸ್ಮಶಾನಕ್ಕಾಗಿ ಒಂದು ಎಕರೆ ಜಮೀನನ್ನು ಮಂಜೂರು ಮಾಡಿಕೊಡಬೇಕು ಮತ್ತು ಈ ಭಾಗದಲ್ಲಿನ ಭೂಕಬಳಿಕೆದಾರರ ವಿರುಧ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಹಕ್ಕೊತ್ತಾಯ ಮಾಡಲಾಯಿತು.
ಪ್ರತಿಭಟನೆ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ , ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ರಾಜು ಸಣ್ಣಕ್ಕಿ , ಕೆಆರ್ ಮುನಿಯಪ್ಪ, ತಿಮ್ಮರಾಯಪ್ಪ, ನಾರಾಯಣ ಸ್ವಾಮಿ, ಎಚ್ ಕೆ ವೆಂಕಟೇಶಪ್ಪ, ಪ್ರಜಾ ವಿಮೋಚನಾ ಚಳುವಳಿಯ ಮುನಿಆಂಜಿನಪ್ಪ, ಇನ್ನೂ ಮುಂತಾದವರು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.




