ಜೂಜಾಟ-ಲಾಟರಿ ಮೂಲಕ ಮನೆ ಮುರಿಯುವವರ ವಿರುದ್ದ ಬಲಿಷ್ಠ ಕಾಯ್ದೆ ಜಾರಿಗೆ: ಸಚಿವ ಆರಗ ಜ್ಞಾನೇಂದ್ರ

ಧಾರವಾಡ: ಈಗಾಗಲೇ ರಾಜ್ಯದಲ್ಲಿ ಆನ್ಲೈನ್ ಜೂಜಾಟಕ್ಕೆ ಬ್ರೆಕ್ ಹಾಕಲು ಸಾಕಷ್ಟುಗಳ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡುವ ಮುಂಚೆ, ನ್ಯಾಯಾಧೀಶರ ಅನುಮತಿ ಪಡೆದುಕೊಂಡ ದಾಳಿ ಮಾಡಬೇಕಾಗಿತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಮಾಡಿ, ನೇರವಾಗಿ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಜೂಜಾಟ, ಲಾಟರಿ ಹಾಗೂ ಅನ್ಲೈನ್ ಜೂಜಾಟಗಳ ಮೂಲಕ ಮನೆ ಮುರಿಯುತ್ತಿದ್ದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಹುಬ್ಬಳ್ಳಿಯ ಕಸಬಾ ಪೊಲೀಸ ಠಾಣೆಯ ಆವರಣದಲ್ಲಿ ವಿವಿಧ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೂಜಾಟ ಹಾಗೂ ಲಾಟರಿಗಳ ಮೂಲಕ ಮನೆ ಮುರುಕು ಕೆಲಸ ಮಾಡುತ್ತಿರುವವರ ವಿರುದ್ಧ ಈಗಾಗಲೇ ಒಂದು ಬಲಿಷ್ಠ ಕಾಯ್ದೆಯನ್ನು ಸಿದ್ಧ ಮಾಡಲಾಗುತ್ತಿದೆ. ಆದಷ್ಟಿ ಬೇಗ ಆ ಕಾಯ್ದೆಯನ್ನು ಜಾರಿಗೆ ತಂದು ಈ ಜೂಜಾಟ,ಲಾಟ್ರಿ ಹಾಗೂ ಆನ್ಲೈನ್ ಜೂಜಾಟ ನಡೆಸುವವರಿಗೆ ಸ್ಪಷ್ಟ ಸಂದೇಶವನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಸುಲಭವಾಗಿ ಹಣ ಮಾಡಲು ರೌಡಿಸಂ ಬಳಸಿ ಜೂಜು ಅಡ್ಡೆಗಳನ್ನು ತೆರೆದು ಕೆಲವರು ಹಣ ಮಾಡುತ್ತಿದ್ದಾರೆ. ಇದರಿಂದ ಕೆಲವು ಕುಟುಂಬಗಳು ಶ್ರೀಮತರಾಗುತ್ತಿದ್ದಾರೆ. ಆದರೆ ಸಾವಿರಾರು ಕುಟುಂಬಗಳು ಪ್ರಸ್ತುತ ದಿನಮಾನಗಳಲ್ಲಿ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಕಾಯ್ದೆ ಜಾರಿಗೆ ತರುವುದರ ಮೂಲಕ ಜೂಜುಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಣ ಇಟ್ಟು ಗೇಮ್ ಆಡುವ ಆನ್ ಲೈನ್ ಗೇಮ್ಸ್ ಗಳ ಬ್ಯಾನ ಕೂಡಾ ಮಾಡುತ್ತಿದ್ದೇವೆ ಎಂದರು.




