ಸಿಎಂ ಬದಲಾವಣೆ ಇಲ್ಲ; ಬಿಎಸ್ವೈ ಪರ ಆರ್ ಶಂಕರ್ ಬ್ಯಾಟಿಂಗ್

ಬಾಗಲಕೋಟೆ : ಪದೇ ಪದೇ ಸಿಎಂ ಬದಲಾವಣೆ ವಿಚಾರ ಹೇಳಲಿಕ್ಕೆ ಇಚ್ಛೆಪಡಲ್ಲ. ಈಗಾಗಲೇ ಆ ವಿಷಯ ತಿಳಿಯಾಗಿದೆ. ಅಂಥ ಯಾವುದೇ ಗೊಂದಲಗಳು ಇಲ್ಲ, ಬದಲಾವಣೆ ಇಲ್ಲವೆಂದು ಬಾಗಲಕೋಟೆಯಲ್ಲಿ ತೋಟಗಾರಿಕೆ ಸಚಿವ ಆರ್ ಶಂಕರ್ ಹೇಳಿದ್ದಾರೆ.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ 19ರಿಂದ ಕ್ಷಿಪ್ರಗತಿಯಲ್ಲಿ ಬದಲಾವಣೆ ಆಗುತ್ತೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅವೆಲ್ಲ ನಾನು ಹೇಳಲಿಕ್ಕೂ ತಯಾರಿಲ್ಲ. ಆ ತರಹದ ಯಾವುದೇ ವಿಷಯ ಇಲ್ಲ. ಅರುಣ್ ಸಿಂಗ್ ಅವರು ಬಂದು ಆಡಳಿತ ಹೇಗಿರಬೇಕು ಅನ್ನೋದನ್ನ ಬಿಟ್ಟು ಬೇರೆ ಚರ್ಚೆ ಮಾಡಿಲ್ಲ. ಇನ್ನು ಉಳಿದಂತಹದ್ದನ್ನು ವರಿಷ್ಠರು ಗಮನ ಹರಿಸುತ್ತಾರೆ ಎಂದರು.
ಇನ್ನೆರಡು ವರ್ಷ ಅಧಿಕಾರವಿದೆ ಸುಸೂತ್ರವಾಗಿ ಅಧಿಕಾರ ಮಾಡಲಿಕ್ಕೆ ಎಲ್ಲರೂ ಸಹಕಾರ ಕೊಡಿ ಎಂದು ನಾನು ಕೇಳಬಲ್ಲೆ ಎಂದರು. ಬಿಜೆಪಿಯಲ್ಲಿ ಬೇಕಾಬಿಟ್ಟಿ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಹೈಕಮಾಂಡ್ ಬಲಹೀನತೆಯೇ ಎನ್ನುವ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.




