ಸರ್ಕಾರಿ ಶಾಲೆ ಕೊಠಡಿ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ

ಬಾಗಲಕೋಟೆ: ಸರ್ಕಾರಿ ಶಾಲಾ ಕೊಠಡಿ ಕಳಪೆ ಕಾಮಗಾರಿ ಮಾಡಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಬಿಜೆಪಿ ಕಾರ್ಯಕರ್ತ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಇಲಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಾಮಗಾರಿ ನಡೆಯುತ್ತಿದೆ.ಕಳಪೆ ಕಾಮಗಾರಿ, ಜೊತೆಗೆ ಕಟ್ಟಡ ಕ್ಯೂರಿಂಗ್ ಆಗಲು ಸರಿಯಾಗಿ ನೀರು ಹೊಡೆದಿಲ್ಲ ಎಂದು ಹೇಳಲು ಗ್ರಾಮಸ್ಥರು ಹೋಗಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತ ಅಯ್ಯಪ್ಪ ಹಿರಿಯಾಳ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವ್ಯಕ್ತಿಯೋರ್ವನಿಗೆ ಬಿಜೆಪಿ ಕಾರ್ಯಕರ್ತ ಅಯ್ಯಪ್ಪ ಹಿರೇಹಾಳ ಕಿತ್ತು ಹಿಡಿದು ನೂಕಿ ಹಲ್ಲೆ ಮಾಡಿದ್ದಾನೆ.
ಉಳಿದ ಗ್ರಾಮಸ್ಥರು ಜಗಳವನ್ನು ಬಿಡಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ೧೨ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ವೀಕ್ಷಣೆಗೆ ಅಧಿಕಾರಿಗಳು ಬಂದಿದ್ದಾಗ ಗ್ರಾಮಸ್ಥರೆಲ್ಲರೂ ಕಳಪೆ ಕಾಮಗಾರಿ ಆಗಿದೆ ಎಂದು ಆರೋಪಿಸಿದ್ದಾರೆ. ಆಗ ಬಿಜೆಪಿ ಕಾರ್ಯಕರ್ತ ಅಯ್ಯಪ್ಪ ಮಧ್ಯೆ ಪ್ರವೇಶಿಸಿ, ಗ್ರಾಮಸ್ಥರೊಂದಿಗೆ ವಾಗ್ವಾದ ನಡೆಸಿದ್ದಾನೆ. ಕಾಮಗಾರಿ ಗುತ್ತಿಗೆ ಬಿಜೆಪಿ ಬೆಂಬಲಿಗರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತ ಅಯ್ಯಪ್ಪ, ಕಾಮಗಾರಿ ಸಮರ್ಥಿಸಿಕೊಂಡಿದ್ದಾನೆ. ಇನ್ನು ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯ ಶಾಲೆಯಿದ್ದು,ಇದೀಗ ೪ ಕೊಠಡಿ ಮಾತ್ರ ಇವೆ. ಈಗ ಹೊಸದಾಗಿ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.




