ಶಾಸಕ ಬೆಲ್ಲದ್ಗೆ ಸಚಿವ ಸ್ಥಾನ ತಪ್ಪಲು ಜಿಲ್ಲೆಯ ಹಿರಿಯ ನಾಯಕರ ಹುನ್ನಾರ: ರೈತ ಮುಖಂಡ ಮಹದೇವಪ್ಪ ಆರೋಪ

ಧಾರವಾಡ : ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಸಲು ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಗೋಕುಲ ಗ್ರಾಮದ ರೈತ ಮುಖಂಡರು ಹಾಗೂ ಅರವಿಂದ ಬೆಲ್ಲದ್ ಬೆಂಬಲಿಗ ಮಹದೇವಪ್ಪ ಪುಜಾರ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲ್ಲದ್ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದ ಶಾಸಕರಾಗಿದ್ದಾರೆ. ಆದರೆ ಸ್ವಪಕ್ಷಿಯರ ಅಸಮಾಧಾನ ಹಾಗೂ ಹುನ್ನಾರದಿಂದ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಸಲು ಜಿಲ್ಲೆಯ ಹಿರಿಯ ಬಿಜೆಪಿ ನಾಯಕರೇ ಪಣತೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟದಲ್ಲಿ ಅರವಿಂದ ಬೆಲ್ಲದ್ ಅವರನ್ನು ನಿರ್ಲಕ್ಷ್ಯ ಮಾಡಿರುವುದನ್ನು ಮನಗಂಡು ರೈತರು ಹಾಗೂ ಅರವಿಂದ ಬೆಲ್ಲದ್ ಬೆಂಬಲಿಗರು ಇಬ್ಬರೂ ನಾಯಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಅರವಿಂದ ಬೆಲ್ಲದ್ ಅವರಿಗೆ ಸಚಿವ ಸ್ಥಾನ ಸಿಗದಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
