ಫೈಟ್ ಮಾಸ್ಟರ್ ವಿವೇಕ್ ಸಾವಿನ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ನಟ ಅಜಯ್ ರಾವ್

ರಾಮನಗರ: ಲವ್ ಯು ರಚ್ಚು ಸಿನಿಮಾ ಚಿತ್ರೀಕರಣ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫೈಟ್ ಮಾಸ್ಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಮಂದಿ ಆರೋಪಿಗಳಿಗೂ ಕೋರ್ಟ್ ಜಾಮೀನು ಕೊಟ್ಟಿದೆ. ಆದರೂ ಮುಂದುವರೆದ ಭಾಗವಾಗಿ ಚಿತ್ರತಂಡದ ಕಲಾವಿದರನ್ನೂ ಸಹ ವಿಚಾರಣೆ ಮಾಡಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ನಟ ಅಜಯ್ ರಾವ್ ಕೂಡ ವಿಚಾರಣೆಗೆ ಹಾಜರಾಗಿದ್ದರು.
ಲವ್ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಪೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಸಂಬಂಧ ಐದು ಮಂದಿಯ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು ಚಿತ್ರದ ಉಳಿದ ಕಲಾವಿದರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಮೊನ್ನೆಯಷ್ಟೇ ಚಿತ್ರದ ನಾಯಕಿ ರಚಿತಾ ರಾಮ್ ರನ್ನ ವಿಚಾರಣೆ ನಡೆಸಿದ್ದ ಪೊಲೀಸರು ಇವತ್ತು ನಟ ಅಜಯ್ ರಾವ್ ರನ್ನು ಕೂಡ ವಿಚಾರಣೆ ಮಾಡಿದರು. ರಾಮನಗರ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ರಿಂದ ನಟ ಅಜಯ್ ರಾವ್ ವಿಚಾರಣೆ ನಡೆಯಿತು. ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಅಜಯ್ ರಾವ್ ರಿಂದ ಹಲವು ಮಾಹಿತಿಗಳನ್ನ ಪಡೆದುಕೊಂಡರು. ಇನ್ನು ವಿಚಾರಣೆಗೆ ಕರೆಯುವ ಪೊಲೀಸರು ಬಂಧಿಸಿಬಿಡಬಹುದು ಎಂದು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ನಟ ಅಜಯ್ ರಾವ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತುಕೊಂಡ ನ್ಯಾಯಾಲಯ ನಟ ಅಜಯ್ ರಾವ್ ಸೇರಿ ಐದು ಮಂದಿ ಆರೋಪಿಗಳಿಗೂ ಅಪಾರ ಸತ್ರ ಹಾಗೂ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಸಿದ್ದಲಿಂಗಪ್ರಭು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.
ಇನ್ನು ಪೊಲೀಸರ ಮುಂದೆ ವಿಚಾರಣೆ ಎದುರಿಸಿ ಮಾಧ್ಯಮಗಳಿಗೆ ಪ್ರತ್ರಿಕಿಯೆ ನೀಡಿದ ನಟ ಅಜಯ್ ರಾವ್, ಪೊಲೀಸರಿಗೆ ಮೊದಲ ದಿನದಿಂದಲೂ ಸಹಕಾರ ಕೊಡುತ್ತಿದ್ದೇನೆ. ಮುಂದೆಯೂ ನನ್ನ ಅವಶ್ಯಕತೆ ಇದ್ದಲ್ಲಿ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ ಎಂದರು. ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟ ಅವರು, ನಾನು ಹೆದರಿಕೊಂಡು ನಿರೀಕ್ಷಣಾ ಜಾಮೀನು ಅರ್ಜಿ ಹಾಕಿಕೊಂಡಿರಲಿಲ್ಲ. ಅದ್ಯಾವ ಮಹನುಭಾವರು ಹೇಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಆದ್ರೆ, ನಾನು ಕೇವಲ ಎಸ್ಎಸ್ಎಲ್ಸಿ ಓದಿದ್ದೇನೆ ಅಷ್ಟೇ, ಪಿಯುಸಿ ಸಹ ಓದಿಲ್ಲ. ಹೆದರಿಕೆ ಇದ್ದಿದ್ದರೇ ನಾನು ಓದು ನಿಲ್ಲಿಸಿ ಬೆಂಗಳೂರಿಗೆ ಬರುತ್ತಿರಲಿಲ್ಲ. ಬೆಂಗಳೂರಿಗೆ ಬಂದು ಇಷ್ಟೆಲ್ಲಾ ಸಾಧನೆ ಮಾಡುತ್ತಿರಲಿಲ್ಲ. ಹೆದರಿಕೊಂಡು ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಪ್ರತಿಯೊಬ್ಬರಿಗೂ ಜವಾಬ್ದಾರಿ ಎನ್ನುವುದು ಇರುತ್ತದೆ. ನನ್ನನ್ನ ನಂಬಿಕೊಂಡು ಹಲವು ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಬಂಡಾವಾಳ ಹಾಕಿದ್ದಾರೆ. ಇನ್ನು ಹಲವು ಸಿನಿಮಾಗಳು ಬಾಕಿ ಇವೆ. ನನ್ನನ್ನ ನಂಬಿಕೊಂಡು ಹೂಡಿಕೆ ಮಾಡುವ ನಿರ್ಮಾಪಕರು ಆತಂಕಕ್ಕೆ ಒಳಗಾಗುತ್ತಾರೆ. ಪೊಲೀಸರು ಹಿಡಿದುಕೊಂಡು ಹೋದಾಗ ನಾನು ಜೈಲಿಂದ ಹಾರಿಕೊಂಡು ಬಂದು ಶೂಟಿಂಗ್ ಮಾಡ್ತೀನಿ ಅನ್ನೋಕಾಗುತ್ತ. ಅದಕ್ಕಾಗಿಯೇ ಲೀಗಲ್ ಆಗಿ ನಾನು ಬೇಲ್ ಗೆ ಅಪ್ಲಿಕೇಶನ್ ಹಾಕಿದ್ದೇನೆ ಅಷ್ಟೇ ಆದರೆ ಭಯದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.
ಅಂದಹಾಗೆ, ಶೂಟಿಂಗ್ ವೇಳೆಯಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ ಎಂಬ ಒಂದು ಹೇಳಿಕೆ ತೋರಿಸಿ ನಾನು ಎಲ್ಲೂ ಆ ರೀತಿಯ ಹೇಳಿಕೆ ಕೊಟ್ಟಿಲ್ಲ. ಆದ್ರೆ. ಚಿಕಿತ್ಸೆ ಪಡೆಯುತ್ತಿರುವ ರಂಜಿತ್ ಬಳಿ ಖಾಸಗಿ ವಿಡಿಯೋ ಮಾಡಿಸಿ ಬಿಟ್ಟಿದ್ದಾರೆ. ಈ ರೀತಿ ಮಾಡುವ ಅವಶ್ಯಕತೆ ಏನಿತ್ತು ಅನ್ನೋದು ಗೊತ್ತಿಲ್ಲ. ಕೆಲವರು ಕೆಟ್ಟದಾಗಿ ಬಿಂಬಿಸುತ್ತಾರೆ ಇನ್ನು ಕೆಲವರು ಒಳ್ಳೆಯದನ್ನು ಬಿಂಬಿಸುತ್ತಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳೊಕೆ ಆಗಲ್ಲ. ಸಹಾಯ ಅಂದರೆ ಸೆಟ್ ನಲ್ಲಿ ನಾನೊಬ್ಬನ್ನೇ ಇರಲಿಲ್ಲ. ಎಲ್ಲರೂ ಇದ್ದಾಗ ನಾನು ಎಲ್ಲರಂತೆ ಹೋಗಲು ಆಗಲ್ಲ. ನಾನು ಒಬ್ಬ ತಿಳುವಳಿಕೆ ಇರುವ ವ್ಯಕ್ತಿ. ಗುಂಪು ಸೇರಿರುವ ಸ್ಥಳದಲ್ಲಿ ನಾನು ಹೋಗೋದು ಸರಿಯಲ್ಲ. ಬೇರೆಯವರು ಇದ್ದಾಗ ನಾನು ಕೂಲ್ ಆಗಿ ಮುಂದಿನ ಬಗ್ಗೆ ಯೋಚನೆ ಮಾಡಬೇಕು. ಚಿತ್ರೀಕರಣದ ವೇಳೆ ಏನೇ ಆದರೂ ಹೀರೋ ಮೊದಲು ಹೋಗಬೇಕೆಂದು ಎಂದು ಫಿಲ್ಮ್ ಚೇಬಂರ್ ನಿಂದ ರೂಲ್ಸ್ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ಲವ್ ಯು ಸಿನಿಮಾ ಚಿತ್ರೀಕರಣ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಇನ್ನು ಕೆಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಆದ್ರೆ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡುವ ಪೊಲೀಸರು ಪ್ರಕರಣ ಹಳ್ಳ ಹಿಡಿಸದಂತೆ ತಮ್ಮ ದಕ್ಷತೆ ತೋರಿ ನೊಂದ ವಿವೇಕ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ.




