ಹುಲಿ ಉಗುರುಗಳ ಮಾರಾಟ ಜಾಲ ಪತ್ತೆ: ಓರ್ವ ಸೆರೆ

ಚಿಕ್ಕಮಗಳೂರು: ಹುಲಿ ಉಗುರುಗಳ ಮಾರಾಟ ಜಾಲವೊಂದು ನಗರದಲ್ಲಿ ಸಕ್ರಿಯವಾಗಿರುವುದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಲ್ಲದೊಡ್ಡಿಯ ಇಂದ್ರನಗರದ ಶೇಖರ್ ಎಂಬಾತ ಹಿರೇಕೊಳಲೆ ರಸ್ತೆಯಲ್ಲಿ ಸೆರೆಯಾದ ಆರೋಪಿ. ಹುಲಿಯ ಎರಡು ಉಗುರುಗಳು ಮತ್ತು ಆತನ ಮೊಬೈಲ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನಿಗೆ ಹುಲಿ ಉಗುರು ನೀಡಿದ್ದಾನೆ ಎನ್ನಲಾದ ಹುಕ್ಕುಂದ ಗ್ರಾಮದ ಸುಂದರ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಹುಲಿ ಸಂಚರಿಸುವ ಜಾಡಿನ ಕಾಫಿ ತೋಟವೊಂದರಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದು ಉಗುರು ಸಂಗ್ರಹಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆರೋಪಿ ಸುಂದರ 2 ಉಗುರುಗಳನ್ನು ಶೇಖರನಿಗೆ ಮಾರಾಟ ಮಾಡಿಕೊಡಲು ಕೊಟ್ಟಿದ್ದ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
ತಲೆಮರೆಸಿಕೊಂಡ ಸುಂದರನ ಸೆರೆಗೆ ಬಲೆ ಬೀಸಲಾಗಿದೆ. ಆತನನ್ನು ವಿಚಾರಣೆ ನಡೆಸಿದರೆ ಹುಲಿ ಉಗುರು ಹೇಗೆ ಸಂಗ್ರಹಿಸಿದ್ದ ಎಂಬುದು ತಿಳಿಯಲಿದೆ.
ಅರಣ್ಯ ಸಂಚಾರಿ ದಳ ವಿಭಾಗದ ಡಿಎಫ್ಒ ಸತೀಶ್ ಮಾರ್ಗದರ್ಶನದಲ್ಲಿ ಎಸಿಎಫ್ ಜಯೇಶ್ ಮತ್ತು ಅರಣ್ಯಾಧಿಕಾರಿ ವೆಂಕಟೇಶ್ ತಂಡ ಹುಲಿ ಉಗುರು ಮಾರಾಟ ತಂಡವನ್ನು ಬೇಧಿಸಿದೆ




