
ಅಬು ಧಾಬಿ: ಕಳಪೆ ಪ್ರದರ್ಶನದ ಕಾರಣ ನಾಯಕನ ಸ್ಥಾನ ಕಳೆದುಕೊಂಡು, ನಂತರ ಆಡುವ ಹನ್ನೊಂದು ಮಂದಿ ಆಟಗಾರರಲ್ಲೂ ಅವಕಾಶ ಪಡೆಯದೆ, ಕೊನೆಗೆ ಅಂಕಣಕ್ಕೂ ಪ್ರವೇಶ ಪಡೆಯದೆ ನೋವಿನಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ತಂಡದ ಪರ ಮತ್ತೆ ಆಡಲಾರೆ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಬಹಳ ನೋವಿನಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ನಲ್ಲಿ ಒಬ್ಬ ಯಶಸ್ವಿ ವಿದೇಶಿ ಆಟಗಾರ ಮಾತ್ರವಲ್ಲ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಡೇವಿಡ್ ವಾರ್ನರ್ ಇತ್ತೀಚೆಗೆ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಪರಿಣಾಮ ನಾಯಕತ್ವ ಕಳೆದುಕೊಂಡರು. ಈ ಕಳಪೆ ಪ್ರದರ್ಶನ ಮುಂದುವರಿದ ಕಾರಣ ಆಡುವ ಹನ್ನೊಂದು ಮಂದಿಯಲ್ಲೂ ಅವಕಾಶ ತಪ್ಪಿತು.
ನಿನ್ನೆ ಎಸ್ಆರ್ ಎಚ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಜಯ ಗಳಿಸಿತ್ತು. ಆದರೆ ಡೇವಿಡ್ ವಾರ್ನರ್ ಡಗೌಟ್ ನಲ್ಲೂ ಕಾಣಲಿಲ್ಲ. ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕೆಲವರು “ಮತ್ತೆ ಸನ್ ರೈಸರ್ಸ್ ಪರ ಬ್ಯಾಟಿಂಗ್ ಇಳಿಯುವುದು ಯಾವಾಗ? ” ಎಂದು ಕೇಳಿದ್ದಾರೆ. ಅದಕ್ಕೆ ವಾರ್ನರ್,”ದುರಾದೃಷ್ಟವಶಾತ್ ಮತ್ತೆ ನೀವು ಕಾಣಲಾರಿರಿ, ದಯವಿಟ್ಟು ನಿಮ್ಮ ಬೆಂಬಲ ಇರಲಿ,” ಎಂದಿದ್ದಾರೆ.




