
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ( IPL- 2022) ಆರ್ಸಿಬಿ 23 ರನ್ಗಳಿಂದ ಶರಣಾಗಿದೆ.
ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಖಾತೆ ತೆರೆದಿದೆ. ರವೀಂದ್ರ ಜಡೇಜಾ ನಾಯಕನಾಗಿ ಮೊದಲ ಗೆಲುವು ಕಂಡಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ಸಿಬಿ, 10ನೇ ಓವರ್ ತನಕ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು. ಮೊದಲ ಹತ್ತು ಓವರ್ಗಳಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 60 ರನ್ಗಳನ್ನಷ್ಟೇ ಗಳಿಸಿತ್ತು. ಆಗ ಜತೆಯಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಪಂದ್ಯದ ಗತಿಯನ್ನೇ ಬದಲಿಸಿದರು. ಪರಿಣಾಮವಾಗಿ ಸಿಎಸ್ಕೆ ನಂತರದ ಹತ್ತು ಓವರ್ಗಳಲ್ಲಿ ಬರೋಬ್ಬರಿ 165 ರನ್ ಪೇರಿಸಿತು.
ಸಿಎಸ್ಕೆ ಪರ ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಚಚ್ಚಿದರು. ಅದರಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್ ಸೇರಿತ್ತು. ಅಂತಿಮವಾಗಿ ಆರ್ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ, 23 ರನ್ಗಳಿಂದ ಸಿಎಸ್ಕೆಗೆ ಶರಣಾಯಿತು. ಆರ್ಸಿಬಿಯ ಈ ಸೋಲಿಗೆ ವಿರಾಟ್ ಕೊಹ್ಲಿಯೇ ದೊಡ್ಡ ಕಾರಣ. ತಂಡಕ್ಕೆ ಅವರ ಅಗತ್ಯವಿದ್ದಾಗ, ಅವರ ಬ್ಯಾಟ್ನಿಂದ ಕೇವಲ 1 ರನ್ ಬಂದಿತು.
ಗುರಿ ಬೆನ್ನಟ್ಟಿದ ಆರ್ಸಿಬಿಗೆ ಆರಂಭದಲ್ಲೇ ಪೆಟ್ಟು ಬಿತ್ತು. ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 8 ರನ್ ಗಳಿಸಿ ಔಟಾದರು. ಹೀಗಿರುವಾಗ ವಿರಾಟ್ ಮೈದಾನಕ್ಕೆ ಬಂದಾಗ ಕಿಂಗ್ ಕೊಹ್ಲಿಯ ಹಳೇ ಫಾರ್ಮ್ ಕಾಣಿಸಲಿದೆಯಂದೆ ಎಲ್ಲರೂ ಅಂದು ಕೊಂಡಿದ್ದರು. ಅತಿ ದೊಡ್ಡ ಗುರಿಯನ್ನು ಸುಲಭವಾಗಿ ಚೇಸಿಂಗ್ ಮಾಡುವುದರಲ್ಲಿ ಪರಿಣತಿ ಹೊಂದಿರುವ ಕೊಹ್ಲಿಯನ್ನು ಮತ್ತೊಮ್ಮೆ ಹಳೆಯ ಖದರ್ ನಲ್ಲಿ ಕಾಣಬಹುದು ಎಂದು ಊಹಿಸಲಾಗಿತ್ತು. ಆದರೆ ವಿರಾಟ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.



