ಮುಂದಿನ ಪೀಳಿಗೆಗಾಗಿ ನೀರನ್ನು ಸಂರಕ್ಷಿಸಿ: ರವೀಂದ್ರ .ಡಿ. ಆರಿ

ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ. ನೀರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ರವೀಂದ್ರ .ಡಿ. ಆರಿ ಹೇಳಿದರು.
ನಗರದ ಕರ್ನಾಟಕ ಜಲಮಂಡಳಿ ವಿಭಾಗ ಕಚೇರಿಯಲ್ಲಿ ಕರ್ನಾಟಕ ಜಲಮಂಡಳಿ, ಹು-ಧ ಮಹಾನಗರ ಪಾಲಿಕೆ, ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಹುಟ್ಟಿನಿಂದ ಸಾಯುವವರೆಗೂ ನೀರು ಮಹತ್ವ ಪಡೆದುಕೊಂಡಿದೆ. ಕೆರೆಗಳು ಪಶು ಪಕ್ಷಿಗಳಿಗೆ ನೀರು ಒದಗಿಸುತ್ತಿದ್ದವು. ಆದರೆ ಇಂದು ಕೆರೆಗಳು ಮಾಯವಾಗುತ್ತಿವೆ ಎಂದು ಆಂತಕ ಹೊರಹಾಕಿದರು.
ಪಶ್ಚಿಮ ಘಟ್ಟಗಳಲ್ಲಿ ಮರಗಳು ಜಾಸ್ತಿ ಇರುವುದರಿಂದ ಮಳೆ ಹೆಚ್ಚಾಗುತ್ತದೆ. ಈ ಭಾಗದಲ್ಲೂ ಮರಗಳನ್ನು ಹೆಚ್ಚಾಗಿ ಬೆಳೆಸಿ, ಜಾಸ್ತಿ ಮಳೆ ಪಡೆಯಬಹುದು. ಮೈಸೂರಿನ ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ನಿರ್ಮಾಣವಾಗಬೇಕು. ಜಲ ದಿನಾಚರಣೆ ಈ ದಿನಕ್ಕೆ ಸೀಮಿತವಾಗದೇ ವರ್ಷ ಪೂರ್ತಿ ನಡೆಯಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ. ಮಾತನಾಡಿ, ಮುಂದಿನ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಜೀವನದಲ್ಲಿ ಸಾಧನೆ ಮಾಡಲು ಶಿಸ್ತು ಮತ್ತು ಪರಿಶ್ರಮ ಅವಶ್ಯಕ. ಅಂತರ್ಜಲ ಸಂರಕ್ಷಣೆಗೆ ಎಲ್ಲರೂ ಶಪಥ ಮಾಡಬೇಕು. ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ನಿರ್ವಹಿಸಬೇಕು. ನಮಗೆ ಬಳಕೆಗೆ ಸಿಗುವ ನೀರನ್ನು ಇತಿಮಿತಿಯಲ್ಲಿ ಉಪಯೋಗಿಸಬೇಕಾಗಿದೆ ಎಂದರು.
