‘ಐಎನ್ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆ ಲೋಕಾರ್ಪಣೆ

ಕೊಡಗು: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ‘ಐಎನ್ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.
ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದ ಬಳಿಕ, ಐಎನ್ಎಸ್ ಶಿವಾಲಿಕ್ ಮಾದರಿಯು ಯುದ್ದ ನೌಕೆಯನ್ನು ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಯುವ ಜನರು ನೌಕಾಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವಂತಾಗಬೇಕು ಎಂದು ಕರೆ ನೀಡಿದರು.
ಭಾರತೀಯ ನೌಕಾದಳವು ಅತ್ಯುತ್ತಮ ಮಾದರಿ ನೌಕಾ ಸೇನೆ ಹೊಂದಿದೆ. ಭಾರತೀಯ ನೌಕಾಪಡೆಗೆ ತನ್ನದೇ ಆದ ಸ್ಥಾನವಿದ್ದು, ನೌಕಾಪಡೆಗೆ ಹೆಚ್ಚಿನ ಯುವಜನರು ಸೇರ್ಪಡೆಯಾಗಬೇಕು ಎಂದರು.
ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೇನಾ ಕ್ಷೇತ್ರವೆಂದರೆ ಹೆಚ್ಚಿನ ಗೌರವ ಭಾವನೆ ಹೊಂದಿದ್ದಾರೆ ಎಂದು ವೈಸ್ ಅಡ್ಮಿರಲ್ ದಾಸ್ ಗುಪ್ತ ಅವರು ಶ್ಲಾಘಿಸಿದರು.
ಭಾರತೀಯ ನೌಕಾಪಡೆಯಿಂದ ಭವಿಷ್ಯದಲ್ಲಿ 41 ಯುದ್ದ ಹಡಗು ನಿರ್ಮಾಣವಾಗಲಿದ್ದು, ಇದರಲ್ಲಿ 31 ಯುದ್ಧ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಮುಂಬಯಿ, ಕೊಲ್ಕತ್ತ, ಗೋವಾ, ವಿಶಾಖಪಟ್ಟಣ ಇಲ್ಲಿ ನಿರ್ಮಾಣವಾಗಲಿದೆ. ಹಾಗೆಯೇ ಕೊಚ್ಚಿನ್ನಲ್ಲಿ ಖಾಸಗಿಯಾಗಿ ಯುದ್ಧ ಹಡಗು ನಿರ್ಮಾಣವಾಗಲಿದೆ. ರಾಷ್ಟ್ರದ ಭದ್ರತೆಗೆ ನೌಕಾಪಡೆ ಹೆಚ್ಚಿನ ಒತ್ತು ನೀಡಿದೆ ಎಂದು ಭಿಸ್ವಜಿತ್ ದಾಸ್ ಗುಪ್ತ ಅವರು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ ಜೀವನ, ಸೇನಾ ಕ್ಷೇತ್ರದಲ್ಲಿನ ಸಾಧನೆಯನ್ನು ವೈಸ್ ಅಡ್ಮಿರಲ್ ಅವರು ವೀಕ್ಷಿಸಿದರು.
