ಯುಪಿ: ಚುನಾವಣಾ ಜ್ವರ, ಪಕ್ಷಾಂತರ ಹಾವಳಿ ತಾರಕಕ್ಕೆ; ಬಿಜೆಪಿಗೆ ಆಘಾತ
ಲಖ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆ ಯಾದ ನಂತರ 7 ಬಿಜೆಪಿ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಮತ್ತೆ 6 ಬಿಜೆಪಿ ಶಾಸಕರು ರಾಜೀನಾಮೆ ನೀಡಿ ಕೇಸರಿ ಪಾಳೆಯದಿಂದ ಹೊರಬರಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದು ನಿಜವಾದರೆ ಕೇವಲ ಒಂದು ವಾರದ ಅವಧಿಯಲ್ಲಿ ಒಟ್ಟು 13 ಬಿಜೆಪಿ ಶಾಸಕರು ಪಕ್ಷದಿಂದ ಹೊರಬಂದಂತೆ ಆಗಲಿದೆ.
ಈಗಾಗಲೇ ಸಿಎಂ ಯೋಗಿ ಆದಿತ್ಯನಾಥ್ ಸಂಪುಟದ ಇಬ್ಬರು ಸಚಿವರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಬಹುತೇಕ ರಾಜೀನಾಮೆ ನೀಡಿ ಹೊರಬಂದಿರುವ ಶಾಸಕರು ಸಮಾಜವಾದಿ ಪಕ್ಷದ ಸೈಕಲ್ ಸವಾರಿ ಮಾಡುವ ನಿರ್ಧಾರ ಮಾಡಿದ್ದಾರೆ ಎಂದೂ ಹೇಳಲಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎನಿಸಿಕೊಂಡಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಆಡಳಿತಾರೂಢ ಬಿಜೆಪಿಗೆ ಅತ್ಯಂತ ಮಹತ್ವ ಮತ್ತು ನಿರ್ಣಾಯಕವಾಗಿದೆ. ಕೇಂದ್ರದಲ್ಲಿ ಮತ್ತೊಂದು ಬಾರಿ ಅಧಿಕಾರ ಸಿಗಬೇಕಾದರೆ ಉತ್ತರಪ್ರದೇಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಶುಕ್ರವಾರ ಅಧಿಸೂಚನೆ
11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರವೇ ಅಧಿಸೂಚನೆ ಪ್ರಕಟವಾಗಲಿದ್ದು ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ನಿರತವಾಗಿವೆ. ಚುನಾವಣಾ ಜ್ವರ ಮತ್ತು ಪಕ್ಷಾಂತರ ಹಾವಳಿ ತಾರಕಕ್ಕೆ ಮುಟ್ಟಿದೆ. 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ
