ಇಂಧನ ವಲಯವನ್ನು ಖಾಸಗಿಕರಣ ಮಾಡುವುದಿಲ್ಲ: ಸಚಿವ ಸುನೀಲ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಇಂಧನ ವಲಯವನ್ನು ಯಾವುದೇ ರೀತಿ ಖಾಸಗಿಕರಣ ಮಾಡುವುದಿಲ್ಲ. ಆ ಉದ್ದೇಶವೂ ಇಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕರುಣಾಕರ ರೆಡ್ಡಿ ಮತ್ತಿತರ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಸರ್ಕಾರ ಗಂಭೀರ ಪ್ರಯತ್ನ ಮಾಡಿದೆ ಎಂದರು.
ವಿದ್ಯುತ್ ವಲಯವನ್ನು ರಾಜ್ಯದಲ್ಲಿ ಖಾಸಗೀಕರಿಸಲಾಗುತ್ತದೆ ಎಂಬುದು ಕೇವಲ ಊಹಾಪೋಹಾ ಎಂದೂ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪಡಿತರ ಚೀಟಿ ಇರುವ ಪ್ರತಿ ಮನೆಗೆ ವಿದ್ಯುತ್: ಇಂಧನ ಸಚಿವ ಸುನೀಲ್ ಕುಮಾರ್
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯರು ರಾಜ್ಯದಲ್ಲಿ 400 ಮೆಗಾವ್ಯಾಟ್ ವಿದ್ಯುತ್ ಹೆಚ್ಚವರಿಯಾಗಿ ಉತ್ಪಾದನೆಯಾಗುತ್ತಿದ್ದು ಅದನ್ನು ಹೊರ ರಾಜ್ಯದ ಉದ್ದಿಮೆಗಳಿಗೆ 2,3 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರಾಜ್ಯದ ಉದ್ದಿಮೆದಾರರಿಗೆ ಪ್ರತಿಯೂನಿಟ್ ಗೆ 8 ರಿಂದ 10 ರೂಪಾಯಿಗಳಷ್ಟು ದುಬಾರಿ ದರ ಹೆಚ್ಚಿಸಲಾಗುತ್ತಿದೆ. ಇದರಿಂದ ಕೈಗಾರಿಕೆಗಳು ಯಾವ ರೀತಿ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಸದ್ಯದಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳಕೆದಾರರು ಮತ್ತು ಉದ್ದಿಮೆದಾರರ ಸಭೆ ಕರೆದು ಅವರಿಗೆ ತೊಂದರೆಯಾಗದಂತೆ ಮತ್ತು ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಸದನಕ್ಕೆ ತಿಳಿಸಿದರು.
ರಾಜ್ಯದಲ್ಲಿ 160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ:
ರಾಜ್ಯದಲ್ಲಿ 160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು ರಾಜ್ಯದಲ್ಲಿ 169 ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 24 ಗಂಟೆ ಒಳಗೆ ಟಿಸಿ ದುರಸ್ತಿಪಡಿಸುವಂತಹ ವ್ಯವಸ್ಥೆಗಾಗಿ ಇಲಾಖೆ ವಿಶೇಷ ಆ್ಯಪ್ ರೂಪಿಸಲಿದೆ. ಇದರಿಂದ ಕೆಟ್ಟು ಹೋಗಿರುವ ಟಿಸಿಗಳು ಯಾವಾಗ ದುರಸ್ತಿಯಾಗುತ್ತದೆ, ಯಾವಾಗ ಮರು ಪ್ರತಿಷ್ಠಾಪಿಸಲಾಗುತ್ತದೆ ಎಂಬ ವಿವರಗಳನ್ನು ಜನಸಾಮಾನ್ಯರು ಕುಳಿತ ಕಡೆಯಿಂದಲೇ ಅರಿಯಬಹುದು ಎಂದರು.
ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ವಿದ್ಯುತ್ ಏರಿಳಿತ ಮತ್ತು ಪ್ರಕೃತಿ ವಿಕೋಪದಿಂದ ರೈತರ ಪಂಪ್ ಸೆಟ್ ಗಳಿಗೆ ತೀವ್ರ ಹಾನಿಯಾಗಿದೆ. ವಿದ್ಯಾರ್ಥಿಗಳ ವ್ಯಾಸಂಕಕ್ಕೂ ತುಂಬಾ ಕಷ್ಟವಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸದಸ್ಯ ಕರುಣಾಕರ ರೆಡ್ಡಿ ಮನವಿ ಮಾಡಿದರು.
ಸಚಿವರು ಉತ್ತರ ಮುಂದುವರಿಸಿ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 483 ಟಿಸಿಗಳು ವಿಫಲವಾಗಿದ್ದು ಕೇವಲ 72 ಗಂಟೆಗಳಲ್ಲಿ ದುರಸ್ತಿ ಮಾಡಿ ಮರು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
