ಹುಬ್ಬಳ್ಳಿಯಲ್ಲಿ ಬದಲಾಗದ ಸರ್ಕಾರಿ ಬ್ಯಾನರ್; ಯಡಿಯೂರಪ್ಪನವರೇ ಇನ್ನೂ ಸಿಎಂ

ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಈಗಾಗಲೇ ಎರಡು ವಾರ ಕಳೆದು ಹೋಗಿದ್ದು, ಕರ್ನಾಟಕ ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಸರ್ಕಾರಿ ಕಚೇರಿ ಮುಂಭಾಗಳಲ್ಲಿ ಮಾತ್ರ ಯಡಿಯೂರಪ್ಪನವರೇ ಇನ್ನೂ ಸಿಎಂ ಆಗಿ ಬ್ಯಾನರ್ಗಳಲ್ಲಿ ಮುಂದುವರೆದಿದ್ದಾರೆ.
ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಬ್ಯಾನರ್ಗಳಲ್ಲಿ ಯಡಿಯೂರಪ್ಪನವರೇ ಇನ್ನೂ ಸಿಎಂ ಆಗಿ ರಾರಾಜಿಸುತ್ತಿದ್ದಾರೆ. ಹುಬ್ಬಳ್ಳಿಯ ಮಿನಿ ವಿಧಾನಸೌಧ ಹಾಗೂ ಹು-ಧಾ ಮಹಾನಗರ ಪಾಲಿಕೆ ಮುಂಭಾಗದ ಸುತ್ತಲೂ ಹಾಕಿರುವ ಬ್ಯಾನರ್ಗಳು ಇವಾಗಿದ್ದು, ಈ ಎಲ್ಲ ಬ್ಯಾನರ್ ಗಳಲ್ಲಿ ಬಿಎಸ್ ವೈ ಮಾಜಿ ಆಗಿದ್ದರು ಕೂಡಾ ಅವರೇ ಹಾಲಿ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮಂತ್ರಿ ಮಂಡಲವೂ ವಿಸ್ತರಣೆಯಾಗಿದೆ. ಆದರೂ ಬ್ಯಾನರ್ಗಳಲ್ಲಿ ಕರ್ನಾಟಕ ರಾಜ್ಯದ ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆದಿರುವುದು ಜಿಲ್ಲೆಯ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ಎತ್ತಿ ತೋರುತ್ತಿದೆ.
