ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ; ಹೊಸ ಕಾಮಿಡಿ ಶೋ?

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ಕಳಿಸಿದ್ದಾರೆ.
ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಅಭಿವೃದ್ಧಿಯ ವಿಚಾರದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ, ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ಸ್ನಲ್ಲಿ ತಮ್ಮ ಸೇವೆ ಮುಂದುವರಿಯಿದೆ ಎಂದೂ ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಇದರ ಹೊರತು ಬೇರೆ ಏನೂ ಇಲ್ಲವಾದರೂ, ರಾಜೀನಾಮೆಗೆ ನಿಜವಾದ ಕಾರಣ, ಪಕ್ಷದ ನಾಯಕರ ಬಗೆಗಿನ ಸಿಧು ಅಸಮಾಧಾನ ಎಂಬ ಮಾತುಗಳು ಕೇಳಿಬರುತ್ತಿವೆ.
ಸಂಪು ರಚನೆ ವೇಳೆ ತಮ್ಮ ಮಾತು ನಡೆಯಲಿಲ್ಲ ಎಂಬ ಅಸಮಾಧಾನ ಸಿಧು ಅವರಿಗಿದೆ ಎನ್ನಲಾಗಿದೆ. ಮಹತ್ವದ ತೀರ್ಮಾನಗಳಲ್ಲಿ ತಮ್ಮ ಸಲಹೆಯನ್ನು ಮನ್ನಿಸಲಾಗಿಲ್ಲ ಎಂಬ ಕಾರಣಕ್ಕಾಗಿ ಸಿಧು ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಸಿಧು ರಾಜೀನಾಮೆ ಬೆನ್ನಲ್ಲೇ ಮಾಜಿ ಸಿಎಂ ಅಮರೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ನಾನು ನಿಮಗೆ ಮೊದಲೇ ಹೇಳಿದ್ದೆ. ಆತ ಸ್ಥಿರ ಮನಃಸ್ಥಿತಿಯ ವ್ಯಕ್ತಿಯಲ್ಲ. ಪಂಜಾಬ್ನಂಥ ಗಡಿ ಜಿಲ್ಲೆಯ ಹೊಣೆ ಹೊರುವ ಸಾಮರ್ಥ್ಯವೂ ಇಲ್ಲ. ಎಂದು ಅಮರೀಂಧರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಮಾಜಿ ಸಿಎಂ ಅಮರೀಂದರ್ ಸಿಂಗ್ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲೂ ದೆಹಲಿಗೆ ತೆರಳುತ್ತಿದ್ದಂತೆಯೇ ಇತ್ತ ಸಿಧು ಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದು ನಾಟಕೀಯವೆನ್ನಿಸಿದರೂ, ತಮ್ಮ ಆಟ ನಡೆಯುವುದು ಕಷ್ಟ ಎಂದು ಮನವರಿಕೆಯಾದ ಆತಂಕದಲ್ಲಿಯೇ ಸಿಧು ಇಮಥ ತೀರ್ಮಾನಕ್ಕೆ ಬಂದಿರಬಹುದೇ ಎಂಬ ಪ್ರಶ್ನೆಯೂ ಎದ್ದಿದೆ.
ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಹಲವು ಹೈಡ್ರಾಮಾಗಳಿಗೆ ಕಾರಣರಾದ ಸಿಧು, ಹಠಕ್ಕೆ ಬಿದ್ದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನೂ ಸಿಎಂ ಹುದ್ದೆಯಿಂದ ಕೆಳಗಿಳಿಸಿ ಗೆದ್ದೆನೆಂದು ಬೀಗಿದ್ದರು. ಸಿಧು ಆಟಕ್ಕೆ ಕುಣಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇದೀಗ ಸಿಧು ರಾಜೀನಾಮೆಯಿಂದ ತೀವ್ರ ಇರಿಸುಮುರಿಸಿಗೆ ಒಳಗಾಗಬೇಕಾಗಿದೆ. ಸಿಧು ಕಾರಣಕ್ಕೆ ಅಮರೀಂದರ್ ಅಂಥ ಹಿರಿಯ ನಾಯಕನನ್ನು ಅವಮಾನಿಸಿದ ಕಾಂಗ್ರೆಸ್ಗೆ ಪಂಜಾಬ್ನಲ್ಲಿ ಇನ್ನೆಂಥ ಹಾದಿ ಕಾದಿದೆಯೊ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ಹೇಳಬೇಕು.
