ರೌಡಿ ಶೀಟರ್ ಬರ್ಬರ ಹತ್ಯೆ: ಹೆಣ ಬಿದ್ದಿದ್ದು ಯಾಕೆ?

ಹುಬ್ಬಳ್ಳಿ: ನಿತ್ಯದ ಓಡಾಟ ಮುಗಿಸಿಕೊಂಡು ಮನೆಗೆ ತೆರಳುತಿದ್ದ ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಪಿ ಅಂಡ್ ಟಿ ಕ್ವಾಟರ್ಸ್ ಹಿಂಬದಿಯ ರಸ್ತೆಯಲ್ಲಿ ನಡೆದಿದೆ. ನಗರದ ತೊರವಿಹಕ್ಕಲದ ನಿವಾಸಿ ಅಕ್ಬರ್ ಅಲ್ಲಾಭಕ್ಷ್ ಮುಲ್ಲಾ ಎಂಬಾತನೇ ಹತ್ಯೆಯಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಹಳೇ ಹುಬ್ಬಳ್ಳಿ ಅರವಿಂದ ನಗರದ ಪಿ ಅಂಡ್ ಟಿ ಕ್ವಾಟರ್ಸ್ ಹಿಂಬದಿಯ ರಸ್ತೆಯಲ್ಲಿ ಹತ್ಯೆ ನಡೆದಿದ್ದು, ಹತ್ಯೆ ಸುದ್ದಿ ತಿಳಿದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹತ್ಯೆಯಾದ ಅಕ್ಬರ ಅಲ್ಲಾಭಕ್ಷ್ಯ ತಡರಾತ್ರಿ ತನ್ನ ಸ್ನೇಹಿತರಾದ ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಸೇರಿ ಮದ್ಯಪಾನ ಮಾಡಿದ್ದನಂತೆ. ಮದ್ಯಪಾನ ಮುಗಿಸಿಕೊಂಡು ಅಕ್ಬರ್ ಅಲ್ಲಾಭಕ್ಷ್ಯ ತನ್ನ ಮನೆಗೆ ತರಳುತ್ತಿರುವ ಸಂದರ್ಭದಲ್ಲಿ ಸದಾನಂದ ಬುರ್ಲಿ ಆತನ ಸಹಚರರು ಸೇರಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹಳೇ ಹುಬ್ಬಳ್ಳಿಯ ಠಾಣೆಯ ಪೊಲೀಸರು ಭೇಟಿ ನೀಡಿ, ಹತ್ಯೆಯಾದ ಅಕ್ಬರ್ ಅಲ್ಲಾಭಕ್ಷ್ಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಹತ್ಯೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿರುವ ಸದನಾಂದ ಬುರ್ಲಿ ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆಗಿದ್ದಾನೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರವಷ್ಟೇ ಕೊಲೆಯ ಹಿಂದಿನ ಅಸಲಿ ಸತ್ಯ ಹೊರಬರಬೇಕಾಗಿದೆ.
