ರೋಹಿಣಿ ಸಿಂಧೂರಿ ಆರೋಪಕ್ಕೆ ಮಹತ್ವದ ತಿರುವು; ಸಾ ರಾ ಮಹೇಶ್ ಒಡೆತನದ ಭೂಮಿ ಮರು ಸರ್ವೆ

ಮೈಸೂರು: ಜೆಡಿಎಸ್ ಶಾಸಕ ಸಾ ರಾ ಮಹೇಶ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಭೂ ಒತ್ತುವರಿ ವಿಚಾರವಾಗಿ ಮಾಡಿದ್ದ ಆರೋಪ ಇದೀಗ ಮಹತ್ವದ ತಿರುವು ಪಡೆದಿದೆ.
ಸಾ ರಾ ಮಹೇಶ್ ಒಡೆತನದ ಜಾಗದ ಮರು ಸರ್ವೇ ನಡೆಸಲು ಭೂದಾಖಲೆಗಳ ಆಯುಕ್ತ ಸೂಚನೆ ನೀಡಿರುವುದು ಈಗಿನ ಬೆಳವಣಿಗೆ.
ಮುಖ್ಯವಾಗಿ, ಬಾರಿ ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಸರ್ವೇ ಕಾರ್ಯ ಮಾಡಲಾಗುತ್ತಿದೆ. ಮಂಡ್ಯ ಭೂದಾಖಲೆಗಳ ಉಪ ನಿರ್ದೇಶಕರಾದ ಉಮೇಶ್, ತುಮಕೂರಿನ ಸುಜಯ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರನ್ನು ಸರ್ವೆ ಕಾರ್ಯಕ್ಕೆ ನೇಮಕ ಮಾಡಲಾಗಿದೆ.
ಈಗಾಗಲೇ ಒಮ್ಮೆ ಸಾ ರಾ ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಲಾಗಿತ್ತು. ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರು. ಇದಾದ ಬಳಿಕ ಮತ್ತೆ ನಡೆಸಲಾಗುತ್ತಿರುವ ಸರ್ವೆ ಇದಾಗಿದೆ. ಎಲ್ಲೆಲ್ಲಿ ಭೂ ಒತ್ತುವರಿಯಾಗಿದೆಯೆಂಬ ಆರೋಪ ಕೇಳಿಬಂದಿದೆಯೊ ಅಲ್ಲೆಲ್ಲ ಈ ಮರು ಸರ್ವೆ ನಡೆಯಲಿದೆ. ವರದಿ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ಹೋಗಿದ್ದ ಸಂದರ್ಭದಿಂದಲೂ ಅವರ ವಿರುದ್ಧ ಸಾ ರಾ ಮಹೇಶ್ ಕಿಡಿಕಾರುತ್ತಲೇ ಇದ್ದರು. ಮೈಸೂರಿನಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ತನಿಖೆಗೂ ರೋಹಿಣಿ ಸಿಂಧೂರಿ ಮುಂದಾಗಿದ್ದರು, ಅದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
