ಜೇಮ್ಸ್ ಸೆಲೆಬ್ರೇಷನ್ ಗೆ ಬ್ರೇಕ್ ಹಾಕ್ತಿದ್ಯಾ ಸರ್ಕಾರ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬರಮಾಡಿಕೊಳ್ಳಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರಲಿರೋ ಜೇಮ್ಸ್ ಸಿನಿಮಾವನ್ನ ಜಾತ್ರೆಯ ರೀತಿಯಲ್ಲಿ ಸೆಲೆಬ್ರೇಟ್ ಮಾಡೋಕೆ ಸಕಲ ಸಿದ್ದತೆಯೂ ನಡೆಯುತ್ತಿದೆ. ಚಿತ್ರವನ್ನ ನಾಳೆ ಬರಮಾಡಿಕೊಳ್ಳಲು ಅಪ್ಪು ಅಭೀಮಾನಿಗಳು ಕಳೆದ ಒಂದು ತಿಂಗಳಿನಿಂದ ಸಿದ್ದತೆ ಮಾಡಿಕೊಳ್ತಿದ್ದಾರೆ. ಆದ್ರೆ ಇದೀಗ ಸರ್ಕಾರದ ನಡೆಯಿಂದಾಗಿ ಅಪ್ಪು ಅಭಿಮಾನಿಗಳು ಮಾತ್ರವಲ್ಲ ಇಡೀ ಕನ್ನಡ ಸಿನಿ ರಸಿಕರೆ ಬೇಸರಗೊಂಡಿದ್ದಾರೆ.
ನಾಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಜೇಮ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಈ ಚಿತ್ರವನ್ನ ನನ್ನ ಹುಟ್ಟುಹಬ್ಬದಂದೆ ಬಿಡುಗಡೆ ಮಾಡೋಣ ಎಂದು ಪುನೀತ್ ಹೇಳಿದ್ದರಂತೆ. ಇದೇ ಕಾರಣಕ್ಕೆ ಜೇಮ್ಸ್ ಸಿನಿಮಾವನ್ನ ಚಿತ್ರತಂಡ ನಾಳೆ ಬಿಡುಗಡೆ ಮಾಡ್ತಿದೆ. ಆದ್ರೆ ನಾಳೆ ಅಂದ್ರೆ ಮಾರ್ಚ್ 17ರಂದು ದಿಡೀರ್ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಈ ನಿಟ್ಟಿನಲ್ಲಿ ರಾಜ್ಯದ ಹಲವು ಕಡೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿ ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಸರ್ಕಾರ ಬ್ರೇಕ್ ಹಾಕಲಿದ್ಯಾ ಅನ್ನೋ ಪ್ರಶ್ನೆ ಶುರುವಾಗಿದೆ.
ಪುನೀತ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಸಿನಿಮಾದ ರಿಲೀಸ್ ಪ್ರಯುಕ್ತ ಅಪ್ಪು ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ. ಆದರೆ ಇದೀಗ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಅನುಮತಿ ಸಿಕ್ಕಿಲ್ಲ ಅನ್ನೋ ಮಾತು ಕೇಳಿ ಬಂದಿದ್ದು ಇದು ಅಪ್ಪು ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಮಾರ್ಚ್ 15ರಂದು 20ರ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದ್ರೆ ಬಳಿಕ ಮಾರ್ಚ್ 20ರ ವರೆಗೆ ಇದ್ದ 144 ಸೆಕ್ಷನ್ ಅನ್ನು ಜಿಲ್ಲಾಡಳಿತ ಕಡಿತಗೊಳಿಸಿ 17ನೇ ತಾರೀಖಿನವರೆಗೆ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಪರಭಾಷ ಚಿತ್ರದ ಸೆಲೆಬ್ರೇಷನ್ ಗೆ ಸಿಕ್ಕ ಅನುಮತಿ ಕನ್ನಡದ ಚಿತ್ರಕ್ಕೆ ಯಾಕಿಲ್ಲ ಅಂತಿದ್ದಾರೆ ಅಭಿಮಾನಿಗಳು.
