ಧಾರವಾಡ ಜಿಲ್ಲಾಸ್ಪತ್ರೆ ಬಳಿ ರಸ್ತೆ ಅಗಲೀಕರಣಕ್ಕೆ ಅಗ್ರಹಿಸಿ ಪ್ರತಿಭಟನೆ

ಧಾರವಾಡ: ಜಿಲ್ಲಾಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮಾಡದೇ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿ ಹಾಗೂ ರಸ್ತೆ ಅಗಲೀಕರಣ ಜೊತೆಗೆ ಸುಸಜ್ಜಿತ ರಸ್ತೆ ಮಾಡುವಂತೆ ಅಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ಥಿಂಕರ್ಸ್ ಪೋರಂ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ಥಿಂಕರ್ಸ್ ಪೋರಂನ ಅಧ್ಯಕ್ಷರಾದ ಪಿ ಎಚ್ ನೀರಲಕೇರಿ ನೇತೃತ್ವದಲ್ಲಿ, ನಗರದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪಾಲಿಕೆಯ ಅಧಿಕಾರಿಗಳ ವಿರುದ್ಧ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಆಸ್ಪತ್ರೆಯು ಸ್ಥಳೀಯರ ಪಾಲಿಗೆ ಸಂಜೀವಿನಿ ಆಗಿದೆ. ಆದರೆ ಇದಕ್ಕೆ ತೆರಳುವ ಮಾರ್ಗಗಳು ತುಂಬಾ ಇಕ್ಕಾಟ್ಟಾಗಿದ್ದು, ತುರ್ತು ಚಿಕಿತ್ಸಾ ವಾಹನಗಳ ಓಡಾಟಕ್ಕೆ ತುಂಬಾ ತೊದರೆಯಾಗುತ್ತಿದೆ. ಕಳೆದ ಹಲವು ದಶಕಗಳಿಂದ ಈ ಸಮಸ್ಯೆ ಇದ್ದರು, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ನೀಡಿದ್ದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮಾರ್ಚ ಅಂತ್ಯದ ಒಳಗಾಗಿ ರಸ್ತೆ ಅಗಲೀಕರಣ ಸೇರಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಎಂದು ಗಡುವು ನೀಡಿದರು.
ಒಂದು ವೇಳೆ ಮಾರ್ಚ್ ಅಂತ್ಯದ ಒಳಗಾಗಿ ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭವಾಗದಿದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
