ಹುಬ್ಬಳ್ಳಿಯಲ್ಲಿ ಪಾಲಿಕೆಯ ಜೆಸಿಬಿ ಘರ್ಜನೆ: 49ನೇ ವಾರ್ಡ್ ನಲ್ಲಿ ರಸ್ತೆ ಅತಿಕ್ರಮಣ!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ರಸ್ತೆ ಅತಿಕ್ರಮಣ ಮಾಡಿದವರಿಗೆ ಮಹಾನಗರ ಪಾಲಿಕೆಯು ಇಂದು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಜೆಸಿಬಿ ಹಾಗೂ ಪೌರ ಕಾರ್ಮಿಕರನ್ನು ಬಳಸಿಕೊಂಡು ಪಾಲಿಕೆಯ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಿದರು.
ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿ 5ರ ವ್ಯಾಪ್ತಿಯ, ವಾರ್ಡ್ ನಂಬರ-49ರ ಗೋಕುಲ್ ರಸ್ತೆ ರವಿನಗರದ ಮುಖ್ಯರಸ್ತೆಯಲ್ಲಿನ ರಸ್ತೆಯ ಅತಿಕ್ರಮಣವನ್ನು ತೊಳನಕೆರೆವರೆಗೆ ಪಾಲಿಕೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ತೆರವು ಮಾಡಿದರು. ಸಹಾಯಕ ಆಯುಕ್ತ ಶರಣಬಸಪ್ಪ ಕೆಂಭಾವಿ ಇವರ ನೇತೃತ್ವದಲ್ಲಿ ಗೋಕುಲ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು.
ರಸ್ತೆ ಅತಿಕ್ರಮಣ ಮಾಡಿಕೊಂಡಂತಹ ಅಂಗಡಿಗಳ ತೆರವು ವೇಳೆ ಕೆಲವು ಅಂಗಡಿ ಮಾಲೀಕರು ಪಾಲಿಕೆ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದು, ಆದರೂ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಅಧಿಕಾರಿಗಳು ತಮ್ಮ ಕಾರ್ಯಚರಣೆಯನ್ನು ಕೈಗೊಂಡರು. ಇನ್ನೂ ರಸ್ತೆ ಅತಿಕ್ರಮಣ ಮಾಡಿಕೊಂಡ ಅಂಗಡಿಗಳಿಗೆ ಈ ಹಿಂದೆಯೇ ಪಾಲಿಕೆಯ ವತಿಯಿಂದ ನೋಟಿಸ್ ನೀಡಲಾಗಿತ್ತಂತೆ. ಆದರೂ ಅಂಗಡಿ ಮಾಲೀಕರು ತಮ್ಮ ಶಾಪ್ಗಳನ್ನು ತೆರವು ಮಾಡದೇ ವ್ಯಾಪಾರ ಮುಂದುವರೆಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು ಮೂವತ್ತಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಮಾಡಿದ್ದಾರೆ.
