ಡಿಸಿಎಂ ಹುದ್ದೆ ಸೃಷ್ಠಿಯಿಲ್ಲ, 29 ಸಚಿವರು ಪ್ರಮಾಣಚನ ಸ್ವೀಕರಿಸುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟರಚನೆಯ ಮೊದಲ ಪಟ್ಟಿಯಲ್ಲಿ 29 ಮಂದಿಗೆ ಸ್ಥಾನಾವಕಾಶ ಕಲ್ಪಿಸಲಾಗಿದೆ. ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಹೊಸಬರಿಗೂ ಸ್ಥಾನವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಟ್ಟಿಯಲ್ಲಿ 8 ಮಂದಿ ಲಿಂಗಾಯುತರು, ತಲಾ 7 ಮಂದಿ ಒಕ್ಕಲಿಗರು ಮತ್ತು ಹಿಂದುಳಿದ ವರ್ಗದ ಸಮುದಾಯದವರು ತಲಾ ಒಬ್ಬರು ಪರಿಶಿಷ್ಟ ಪಂಗಡ ಹಾಗೂ ರೆಡ್ಡಿ ಸಮುದಾಯ ಮತ್ತು ಮಹಿಳೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಅನುಭವ ಮತ್ತು ಹೊಸ ಶಕ್ತಿ ಅಥವಾ ಉತ್ಸಾಹದ ಸಮ್ಮೀಶ್ರಣ ಮಾಡಿ ನೂತನ ಪಟ್ಟಿ ರೂಪಿಸಲಾಗಿದೆ. ನೂತನ ಸಚಿವರು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವರು. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಳೆದ 60 ವರ್ಷದ ರಾಜಕೀಯ ಇತಿಹಾಸದಲ್ಲಿ ಎಲ್ಲಾ ಸರ್ಕಾರಗಳು ಹಂತ ಹಂತವಾಗಿಯೇ ಸಂಪುಟ ವಿಸ್ತರಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರದೇಶವಾರು ಪ್ರಾತಿನಿಧ್ಯ ನೀಡಲಾಗುವುದು ಎಂದರು. ಕೆಲವು ಹಿರಿಯರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಪಕ್ಷ ಪ್ರಮುಖರು ತೀರ್ಮಾನಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಶಕ್ತ ನಾಯಕತ್ವ ಹಾಗೂ ಪಕ್ಷ ವರಿಷ್ಠರ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡುತ್ತೇವೆ. ಬಿಬಿಎಂಪಿ ಸೇರಿದಂತೆ ಮುಂಬರುವ ಚುನಾವಣೆಗಳ ಸವಾಲು ಎದುರಿಸುವ ನಿಟ್ಟಿನಲ್ಲಿ ನೂತನ ಸಂಪುಟ ರಚನೆಯಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಅವರ ವಿಶ್ವಾಸಗಳಿಸಲು ಪ್ರಯತ್ನಿಸಲಾಗುವುದು. ಪ್ರಮಾಣ ವಚನ ಮುಗಿದ ಕೂಡಲೇ ಸಂಪುಟ ಸಭೆ ಸೇರಿ ಉತ್ತಮ ಆಡಳಿತ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
