ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಸಂಪರ್ಕಕ್ಕೆ WhatsApp ಗ್ರೂಪ್ ರಚನೆ: ಪ್ರತಾಪ್ ಸಿಂಹ

ಮೈಸೂರು ; ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಸೇರಿ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿದ್ದಾರೆ. ಈ ಮೂಲಕ ಸಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ಮೃಗಾಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೆಳ ಸೇತುವೆ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಜೊತೆ ನಾವು ನೇರ ಸಂಪರ್ಕದಲ್ಲಿದ್ದೇವೆ. ಅವರ ಅನುಕೂಲಕ್ಕಾಗಿ ನಾನು ಮತ್ತು ಸಂಸದ ತೇಜಸ್ವಿ ಸೂರ್ಯ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ಕೊಡುತ್ತಿದ್ದೇವೆ ಎಂದರು.
ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ತಕ್ಷಣ ಸಿಕ್ಕ ರೈಲುಗಳನ್ನ ಬಳಸಿಕೊಂಡು ಅಲ್ಲಿಂದ ಹೊರ ಬರುವಂತೆ ಮಾಹಿತಿ ನೀಡುತ್ತಿದ್ದೇವೆ. ಹಂಗೇರಿ ಸೇರಿದಂತೆ ಪಕ್ಕದ ಸ್ಥಳಗಳಿಗೆ ತಲುಪಿದರೇ ಅಲ್ಲಿಂದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯ ನೋಡಲ್ ಅಧಿಕಾರಿಗಳ ನಂಬರ್ ಸಹ ನೀಡಲಾಗಿದೆ ಎಂದು ತಿಳಿಸಿದರು.
ಉಕ್ರೇನ್ ಯುದ್ಧದಲ್ಲಿ ಹಾವೇರಿ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ನನಗೆ ನೋವಾಗಿದೆ. ಈ ವಿದ್ಯಾರ್ಥಿ ನಂಜನಗೂಡಿನಲ್ಲಿ ಓದಿದ್ದಾನೆ. ಹಿಂದೆ ಕತಾರ್ ಹಾಗೂ ಆಫ್ಘಾನಿಸ್ತಾನದಲ್ಲಿ ಜನರನ್ನ ರಕ್ಷಣೆ ಮಾಡುವಾಗ ಒಂದು ಸಾವಾಗಿರಲಿಲ್ಲ. ಆದರೆ ಮೋದಿ ಆಡಳಿತದಲ್ಲಿ ರೆಸ್ಕ್ಯೂ ಮಾಡುವಾಗ ಮೊದಲ ಸಾವು ಸಂಭವಿಸಿದೆ. ಇದು ದುಃಖ ತರುವ ವಿಚಾರವಾಗಿದೆ ಎಂದರು.
ಅಂದಾಜಿನ ಪ್ರಕಾರ, ಉಕ್ರೇನ್ನಲ್ಲಿ 10 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನಿಲುವು ತಾಳಿದ್ದು, ವಿದ್ಯಾರ್ಥಿಗಳಿಗೆ ಆತಂಕ ತಂದಿದೆ. ಅಲ್ಲಿಂದ ಅವರನ್ನು ಕರೆತರುವ ಕೆಲಸ ಸಮರೋಪಾದಿಯಲ್ಲಿ ಸಾಗಿದೆ. ಆದರೆ ಸ್ಥಳಾಂತರದ ಕೆಲಸ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಚೀನಾ ಸೇರಿದಂತೆ ಹಲವು ದೇಶದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದರೂ ಸಹ ಭಾರತದಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಣೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
