ಧಾರವಾಡಕ್ಕೂ ಕಾಲಿಟ್ಟ ಮುಸ್ಲಿಂ ವ್ಯಾಪಾರಸ್ಥರ ನಿರ್ಬಂಧ ವಿವಾದ: ಅಂಗಡಿಗಳ ತೆರವಿಗೆ ಮನವಿ

ಧಾರವಾಡ: ಇಷ್ಟು ದಿನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೀಮಿತವಾಗಿದ್ದ ಹಿಂದೂ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿವಾದವು, ಇದೀಗ ಧಾರವಾಡ ಜಿಲ್ಲೆಗೂ ಕಾಲಿಟ್ಟಿದೆ. ಪ್ರಸಿದ್ಧ ಹಿಂದೂ ದೇವಸ್ಥಾನ ಬಳಿ ಇರುವ ಮುಸ್ಲಿಂ ಅಂಗಡಿಗಳ ತೆರವಿಗೆ ಒತ್ತಾಯಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಇಂದು ಧಾರವಾಡದಲ್ಲಿ ಪ್ರತಿಭಟನೆ ಮಾಡಿ, ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು.
ನಗರದ ಹೊರವಲಯದ ಕಲಘಟಗಿ ರಸ್ತೆಯ ಬಳಿ ಇರುವ ಪ್ರಸಿದ್ಧ ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಯೊಂದಿಗೆ ದೇವಸ್ಥಾನ ಆಡಳಿತ ಮಂಡಳಿಯ ಕಚೇರಿಯವರೆಗೂ ಹೆಜ್ಜೆ ಹಾಕಿ, ಶ್ರೀ ನುಗ್ಗಿಕೇರಿ ಅಂಜನೇಯ ದೇವಸ್ಥಾನ ಆಡಳಿತ ಮಂಡಳಿಯವರಿಗೆ ಅಂಗಡಿಗಳ ತೆರವಿಗಾಗಿ ಮನವಿ ಮಾಡಿಕೊಂಡರು.
ಇನ್ನೂ ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಅನ್ನಪ್ಪ, ಇತ್ತೀಚೆಗೆ ರಾಜ್ಯ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪನ್ನು ಧಿಕ್ಕರಿಸಿ ಮುಸ್ಲಿಂರು ಹೇಳಿಕೆ ನೀಡುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಅಗೌರವ ತೋರಿಸುತ್ತಿದ್ದಾರೆ. ಜೊತೆಗೆ ಹಿಂದೂಗಳ ಮೇಲೆ ಇವರ ದೌರ್ಜನ್ಯ ಹೆಚ್ಚಾಗುತ್ತಿದೆ. ಲವ್ ಜಿಹಾದ್ ಮೂಲಕ ನಮ್ಮ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಹಾಗಾಗಿ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ ನಡೆಸುವವರಿಗೆ , ಹಿಂದೂ ದೇವಸ್ಥಾನದ ಬಳಿ ವ್ಯಾಪಾರ ಮಾಡಲು ಅವಕಾಶ ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದರು.
