ಸಂಸತ್ತಿನ ಮುಂಗಾರು ಅಧಿವೇಶನ : ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು ಪ್ರತಿಪಕ್ಷಗಳ ನಾಯಕರ ಸಭೆ

ನವದೆಹಲಿ : ಸೋಮುವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಅಗತ್ಯ ಕಾರ್ಯತಂತ್ರ ರೂಪಿಸಲು ಭಾನುವಾರ ಪ್ರತಿಪಕ್ಷಗಳ ನಾಯಕರು ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ರೈತರ ಆಂದೋಲನ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಮತ್ತು ಸುಪ್ರೀಂಕೋರ್ಟ್ ಟಿಪ್ಪಣಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ದೇಶದ್ರೋಹ ಕಾನೂನುಗಳ ಸಿಂಧುತ್ವ ಕುರಿತು ಕರೆದಿರುವ ಸರ್ವಪಕ್ಷ ಸಭೆ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪವಾಗುವ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಒಮ್ಮತಕ್ಕೆ ಬರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ , ರೈತರ ಸಮಸ್ಯೆ, ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದ ವರ್ತನೆ , ಐಪಿಸಿ 124 ಎ ಕುರಿತು ಸುಪ್ರೀಂ ಕೋರ್ಟ್ನ ಅಭಿಪ್ರಾಯಗಳು ಮತ್ತಿತರ ವಿಷಯಗಳು ಗಂಭೀರವಾಗಿ ರಾಷ್ಟ್ರೀಯ ಮಹತ್ವ ಪಡೆದಿವೆ.
ಇವೂ ಸೇರಿದಂಥೆ ಅಧಿವೇಶನದಲ್ಲಿ ಪ್ರಸ್ತಾಪಕ್ಕೆ ಬರುವ ಎಲ್ಲ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ವಿರೋಧ ಪಕ್ಷಗಳಲ್ಲಿ ಗರಿಷ್ಠ ಒಮ್ಮತವನ್ನು ಸಾಧಿಸುವುದು ಇದರ ಉದ್ದೇಶ.
ಕೇಂದ್ರದ ಖಾಸಗೀಕರಣ ನೀತಿ ಮಸೂದೆ ಮತ್ತು ಕಾರ್ಖಾನೆ ನೌಕರರ ಮುಷ್ಕರ ವಿಷಯದಲ್ಲಿ ಒಮ್ಮತಮೂಡದಿದ್ದರೆ ಸಂಸತ್ತಿನ ಉಭಯ ಸದನಗಳಲ್ಲಿ ನೇರವಾಗಿ ಈ ವಿಷಯ ಪ್ರಸ್ತಾಪಿಸಲು ಎಡಪಕ್ಷಗಳು ಉದ್ದೇಶಿಸಿವೆ ಎಂದು ತಿಳಿದು ಬಂದಿದೆ.
ಸೋಮವಾರದಿಂದ ಆರಂಭವಾಗುವ ಸಂಸತ್ ಅಧಿವೇಶನ ಬರುವ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನ ಸಂದರ್ಭದಲ್ಲಿ ಅನೇಕ ವಿಧೇಯಕಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
